ಮೈಸೂರು: ‘ಸರ್ಕಾರಿ ಶಾಲೆಗಳಲ್ಲಿ ಹಚ್ಚಿನ ಫಲಿತಾಂಶ ಬರಲು ಶಿಕ್ಷಕರು ಸ್ಪಷ್ಟ ಗುರಿ ಹಾಕಿಕೊಂಡು ಅದರಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
ತಾಲ್ಲೂಕಿನ ಇಲವಾಲ ಹೋಬಳಿಯ ಗುಂಗ್ರಾಲ್ಛತ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಸು ಫೌಂಡೇಶನ್ ಹಾಗೂ ಯುನಿಲಾಗ್ ವತಿಯಿಂದ ನೂತನವಾಗಿ ಆರಂಭಿಸಿರುವ ಗ್ರಂಥಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಖಾಸಗಿ ಶಾಲೆಗಳಂತೆಯೇ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಫಲಿತಾಂಶ ಬಂದರೆ ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಅಲ್ಲದೇ, ಮಕ್ಕಳು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಾರೆ’ ಎಂದರು.
‘ಇಂದು ಸಮಾಜದಲ್ಲಿ ದೊಡ್ಡ ಸ್ಥಾನಮಾನ ಪಡೆದಿರುವವರು ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.
‘ಜಯಪುರ ಗ್ರಾಮದಲ್ಲಿರುವ ಪ್ರತಿ ದಲಿತರ ಮನೆಯಲ್ಲೂ ವಿದ್ಯಾವಂತರಿದ್ದಾರೆ. ಪಿಎಚ್.ಡಿ ಮಾಡಿದವರೂ ಇದ್ದಾರೆ. ನನ್ನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇದು ದಾಖಲೆ. ಅಂಬೇಡ್ಕರ್ ಕನಸನ್ನು ಅವರು ನನಸು ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ದೊರೆತ ಅವಕಾಶ ಬಳಸಿಕೊಂಡು ವಿದ್ಯಾವಂತರಾಗಿ ಉದ್ಯೋಗ ಪಡೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ಯುನಿಲಾಗ್ ಸಂಸ್ಥಾಪಕ ಅಚ್ಚುತ ಬಚ್ಚಳ್ಳಿ, ನಿರ್ದೇಶಕಿ ಸೌಮ್ಯಾ ಪ್ರಕಾಶ್, ಕಲಿಸು ಫೌಂಡೇಶನ್ ಸಿಇಒ ಎಂ.ಎಂ.ನಿಖಿಲೇಶ್, ಜಿ.ಪಂ. ಮಾಜಿ ಸದಸ್ಯ ಅರುಣ್ಕುಮಾರ್, ಬಿಇಒ ಪ್ರಕಾಶ್, ಮುಖ್ಯಶಿಕ್ಷಕ ಎಂ.ಸಿ. ಉಮಾಶಂಕರ್, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಪಿಡಿಒ ಶಿವಣ್ಣ, ಗ್ರಾ.ಪಂ. ಸದಸ್ಯರಾದ ಯದುವರ, ಸುರೇಶ್, ಮುಖಂಡರಾದ ಸೀತಾರಾಮು, ಜಯರಾಮೇಗೌಡ, ಮಂಜು, ಮಹೇಂದ್ರ, ಸಿದ್ದರಾಮು, ಕೆಂಪಯ್ಯ, ಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.