ADVERTISEMENT

ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 3:12 IST
Last Updated 21 ಜನವರಿ 2026, 3:12 IST
ಹುಣಸೂರು ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕ ಜಿ.ಡಿ.ಹರೀಶ್‌ ಗೌಡ ಮಂಗಳವಾರ ಪರಿಶೀಲಿಸಿದರು
ಹುಣಸೂರು ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕ ಜಿ.ಡಿ.ಹರೀಶ್‌ ಗೌಡ ಮಂಗಳವಾರ ಪರಿಶೀಲಿಸಿದರು   

ಹುಣಸೂರು: ‘ರಾಷ್ಟ್ರೀಯ ಹೆದ್ದಾರಿ 275ಕ್ಕೆ ಸೇರಿದ ದೇವರಾಜ ಅರಸು ಪುತ್ಥಳಿಯಿಂದ ಹಾಳಗೆರೆ ವರೆಗೆ ₹56 ಕೋಟಿ ವೆಚ್ಚದಲ್ಲಿ 5.1 ಕಿ.ಮಿ. ನಾಲ್ಕು ಪಥ ಸೇರಿದಂತೆ ಸರ್ವಿಸ್‌ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಶಾಸಕ ಜಿ.ಡಿ.ಹರೀಶ್‌ ಗೌಡ ಹೇಳಿದರು.

ನಗರದ ಬೈಪಾಸ್‌ ರಸ್ತೆಯಲ್ಲಿ ನಡೆದಿರುವ ರಸ್ತೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಹುಣಸೂರು ನಗರ ಹೊರವಲಯದಿಂದ ಹಾಳಗೆರೆ ಗ್ರಾಮದವರೆಗೆ ರಸ್ತೆ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ₹ 80 ಕೋಟಿ ಅಂದಾಜಿನಲ್ಲಿ ನಾಲ್ಕು ಪಥದ ರಸ್ತೆ ಅಭಿವೃದ್ಧಿಗೆ 2024 ರಲ್ಲಿ ಅನುಮೋದನೆ ನೀಡಿದ್ದರು. ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡು ಶೇ 40 ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದರು.

‘ಹುಣಸೂರು ನಗರದೊಳಗೆ ಹಾದು ಹೋಗುವ ಈ ರಸ್ತೆಯಿಂದಾಗಿ ಒಳಚರಂಡಿ ಮತ್ತು ಇತರೆ ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಮಾತನಾಡಬೇಕಾಗಿದ್ದ ಕಾರಣ ಅಧಿಕಾರಿಗಳ ತಂಡದೊಂದಿಗೆ 5 ಕಿ.ಮಿ. ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲವೊಂದು ಮಾರ್ಪಾಡುಗಳನ್ನು ತಿಳಿಸಿ ಮನವರಿಕೆ ಮಾಡಿದ್ದೇವೆ. ನಗರ ವ್ಯಾಪ್ತಿಯ ಕೋರ್ಟ್‌ ವೃತ್ತದ ಬಳಿ ಮಂಜುನಾಥ ಬಡಾವಣೆಯಿಂದ ಶಬ್ಬೀರ್‌ ನಗರದ ಮಾರ್ಗವಾಗಿ ಹೊಳ್ಳಮ್ಮನ ಕಟ್ಟೆ ಮಳೆ ನೀರು ಸೇರಿದಂತೆ ಯುಜಿಡಿ ನೀರು ಹಾದು ಹೋಗಬೇಕಿದ್ದು, ಅಗತ್ಯಕ್ಕೆ ತಕ್ಕಂತೆ ಕಾಮಗಾರಿ ನಡೆಸಲು ಸೂಚಿಸಲಾಗಿದೆ’ ಎಂದರು.

ADVERTISEMENT

ಮೇಲ್ಸೇತುವೆ: ‘ಎಮ್ಮೆಕೊಪ್ಪಲು, ಕಲ್ಲಬೆಟ್ಟ ತಿರುವು ಮತ್ತು ಬನ್ನಿಕುಪ್ಪೆ ಸ್ಥಳವನ್ನು ಅಪಘಾತ ವಲಯಗಳು ಎಂದು ಗುರುತಿಸಿರುವ ಹೆದ್ದಾರಿ ಪ್ರಾಧಿಕಾರ ಮೇಲ್ಸೇತುವೆ ನಿರ್ಮಿಸಲು ತೀರ್ಮಾನಿಸಿದೆ. ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಹಸಿರು ವಲಯದಿಂದ ಅನುಮೋದನೆ ಪಡೆಯದೆ ಕಾಮಗಾರಿ ನಡೆಸಿದ ಕಾರಣ ತಡೆ ಹಿಡಿಯಲಾಗಿತ್ತು. ಇತ್ತೀಚೆಗೆ ಪರಿಸರ ಸಂರಕ್ಷಣೆ ಸಮಿತಿ ಸಭೆ ನಡೆಸಿ ಮೇಲ್ಸೇತುವೆ ನಿರ್ಮಾಣಕ್ಕೆ ತೆರವುಗೊಳಿಸಿದ ಮರಗಳಿಗೆ ಪರ್ಯಾಯವಾಗಿ ಎರಡು ಪಟ್ಟು ಸಸಿ ಬೆಳೆಸಲು ಅರಣ್ಯ ಇಲಾಖೆಗೆ ಹಣ ಪಾವತಿಸಿದ ಬಳಿಕ ಕಾಮಗಾರಿ ಆರಂಭಿಸಲು ಹಸಿರು ನಿಶಾನೆ ತೋರಿಸಲಾಗಿದೆ. ಈ ಕಾಮಗಾರಿಗೆ ಕೇಂದ್ರ ಸರ್ಕಾರ ₹ 13 ಕೋಟಿ ಬಿಡುಗಡೆ ಮಾಡಿದ್ದು ಜನವರಿ 2027 ಕ್ಕೆ ಲೋಕಾರ್ಪಣೆ ಆಗಲಿದೆ’ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಶ್ರೀಧರ್‌ ಮಾತನಾಡಿ, ‘ಮೈಸೂರಿನ ಹಿನಕಲ್‌ನಿಂದ ಕುಶಾಲನಗರದವರಗೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ 275ರ ದುರಸ್ತಿ ಕಾಮಗಾರಿಗೆ ಕೇಂದ್ರ ಸರ್ಕಾರ ₹40 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕ ದುರಸ್ತಿ ಕಾಮಗಾರಿ ನಡೆಯಲಿದೆ’ ಎಂದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಎಂಜಿನಿಯರಿಂಗ್‌ ತಂಡ, ನಗರಸಭೆ ಆಯುಕ್ತೆ ಮಾನಸ, ಜೆಡಿಎಸ್‌ ಮುಖಂಡರಾದ ಸತೀಶ್‌ ಕುಮಾರ್‌, ಸತೀಶ್‌ ವಿ ಪಾಪಣ್ಣ, ಶ್ರೀಧರ್‌ ಹರವೆ, ಕೃಷ್ಣಾಚಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.