ಮೈಸೂರು: ‘ಬಿಜೆಪಿ ವಿರುದ್ಧ ಶೇ 40 ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೆಂದಿಗಿಂತ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್ ಆಸೆಗೆ ಹಳೆಯ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ’ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಆರೋಪಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ. ಗ್ಯಾರಂಟಿ ಯೋಜನೆಗಳ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ವಿದ್ಯುತ್, ಹಾಲು, ಪೆಟ್ರೋಲ್, ಡೀಸೆಲ್, ನೀರು, ಸಾರಿಗೆ ಬಸ್ ದರವನ್ನು ಹೆಚ್ಚಳ ಮಾಡಿದೆ. ದುಪ್ಪಟ್ಟು ದರ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಕಾಮಗಾರಿ ನೀಡಲು ಕಳೆದ ಸರ್ಕಾರದ ಅವಧಿಗಿಂತ ಹೆಚ್ಚು ಕಮಿಷನ್ ಪಡೆಯಲಾಗುತ್ತಿದೆ. ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವರ್ಷಗಳ ಹಿಂದೆ ₹10 ಕೋಟಿ ವೆಚ್ಚದಲ್ಲಿ ಬೆಟ್ಟಹಳ್ಳಿ-ಸಿಗೋಡು, ₹3 ಕೋಟಿ ವೆಚ್ಚದಲ್ಲಿ ತಂದ್ರೆ ಗ್ರಾಮದಿಂದ ಸಾಲಿಗ್ರಾಮ, ₹3 ಕೋಟಿ ವೆಚ್ಚದಲ್ಲಿ ಹನಸೋಗೆ-ಚುಂಚನಕಟ್ಟೆ, ಹನಸೋಗೆ-ಚಿಕ್ಕ ಚುಂಚನಕಟ್ಟೆ ಗ್ರಾಮಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಈವರೆಗೂ ಕಾಮಗಾರಿ ಮುಕ್ತಾಯಗೊಂಡಿಲ್ಲ’ ಎಂದು ದೂರಿದರು.
‘ಮೈಸೂರು-ನಂಜನಗೂಡು ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಎರಡು ಎಕರೆ ಜಮೀನು ಹೊಂದಿರುವ ರೈತ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದರೆ ಹತ್ತು ಗುಂಟೆಗೆ ನಕ್ಷೆ ಅನುಮೋದನೆ ಮಾಡಲು ಉಳಿದ ಜಮೀನನ್ನು ರಿಂಗ್ ರಸ್ತೆಗೆ ಬಿಟ್ಟುಕೊಡುಂತೆ ಮುಡಾ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಅದೇ ರೀತಿ ಮೈಸೂರು-ಬೆಂಗಳೂರು ಇನ್ಫಾಸ್ಟ್ರಕ್ಚರ್ ಕಾರಿಡಾರ್ ಮಾಡುವಾಗ ರೈತರ ಜಮೀನನ್ನು ವಶಪಡಿಸಿಕೊಂಡು ರೈತರಿಂದಲೂ ಟೋಲ್ ವಸೂಲಿ ಮಾಡಲಾಗುತ್ತಿದೆ. ಈಗ ಅಕ್ಕಪಕ್ಕದ ಜಮೀನು ಬಿಡುವಂತೆ ದಬ್ಬಾಳಿಕೆ ಮಾಡಲಾಗುತ್ತಿದೆ’ ಎಂದು ಕಿಡಿಕಾರಿದರು.
‘ಸಿದ್ದರಾಮಯ್ಯ ಅವರನ್ನು ಹೆದರಿಸಲು ಪ್ರಯತ್ನ ಮಾಡಿದ ರೀತಿಯಲ್ಲಿ ಸಾ.ರಾ. ಮಹೇಶ್ರನ್ನು ಬೆದರಿಸಲು ಆಗಲ್ಲ. ಅದಕ್ಕೆ ಅವಕಾಶ ಕೊಡುವುದಿಲ್ಲ. ಒಂದು ಬಾರಿ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿದ ಮೇಲೆ ನಕ್ಷೆ ಮಾಡಲಾಗುತ್ತದೆ. ಮತ್ತೆ ಅದನ್ನು ಬದಲಿಸುವುದಕ್ಕೆ ಅವಕಾಶವಿಲ್ಲ. ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದವರೂ ಇಂತಹ ಮಾತುಗಳನ್ನಾಡುತ್ತಾರೆ’ ಎಂದು ಹೇಳಿದರು.
ಪಾಕಿಸ್ತಾನದ ಜೊತೆ ಯುದ್ಧಕ್ಕೆ ಸಿದ್ಧ ಎಂಬ ಸಚಿವ ಜಮೀರ್ ಅಹಮ್ಮದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ಅವರು ಪಾಕಿಸ್ತಾನಕ್ಕೆ ಹೋಗಿ ಯುದ್ಧ ಮಾಡುವುದು ಬೇಡ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಲಿ’ ಎಂದರು.
‘ಸಿದ್ದರಾಮಯ್ಯ ಬಹಿರಂಗ ಸಮಾವೇಶದಲ್ಲಿ ಎಎಸ್ಪಿ ಅವರಿಗೆ ಕಪಾಳ ಮೋಕ್ಷ ಮಾಡಲು ಕೈ ಎತ್ತಿದ್ದು ಸರಿಯಲ್ಲ. ಕರೆದು ಬುದ್ದಿ ಹೇಳಿದ್ದರೆ, ಅಮಾನತು ಮಾಡಿದ್ದರೆ ಆಗುತ್ತಿತ್ತು. ಗುಪ್ತಚರ ಇಲಾಖೆ ವಿಫಲವಾಗಿದೆ ಎಂದರೆ ನೀವೇ ವಿಫಲರಾಗಿದ್ದೀರಿ ಎಂದರ್ಥ’ ಎಂದರು.
‘ಆರ್ಟಿಐ ಕಾರ್ಯಕರ್ತರನ್ನು ದೂರವಿಡಿ’
‘ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಆಯುಕ್ತರು ಒಳ್ಳೆಯವರು. ಆದರೆ ಕಚೇರಿಯಲ್ಲಿ ಸಿಬ್ಬಂದಿಗಿಂತ ಆರ್ಟಿಐ ಕಾರ್ಯಕರ್ತರ ಹಾವಳಿಯೇ ಹೆಚ್ಚಾಗಿದೆ’ ಎಂದು ಮಹೇಶ್ ದೂರಿದರು. ‘ಪ್ರತಿ ವಿಭಾಗಕ್ಕೂ ಸಿಸಿಟಿವಿ ಅಳವಡಿಸಬೇಕು. ದಲ್ಲಾಳಿಗಳಿಗೆ ಆರ್ಟಿಐ ಕಾರ್ಯಕರ್ತರಿಗೆ ಕಚೇರಿ ಒಳಗೆ ಓಡಾಡಲು ಅವಕಾಶ ನೀಡಬಾರದು. ಮುಡಾ ಅಧಿಕಾರಿಗಳು ಹಾಗೂ ಪೊಲೀಸರು ನಿಗಾ ವಹಿಸಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.