
ಮೈಸೂರು: ‘ಮನುವಾದಿಗಳು ಸಂವಿಧಾನವನ್ನು ಮೌನವಾಗಿ ಮುಗಿಸಲು ಪಣತೊಟ್ಟು ಅದರಲ್ಲಿ ಯಶಸ್ವಿ ಆಗುತ್ತಿದ್ದಾರೆ. ಮನೆ, ಮನಸ್ಸು, ಎದೆಯೊಳಗೆ ಇಟ್ಟಿರುವ ಮನುಸ್ಮೃತಿಯನ್ನು ಸುಡುವುದು ಯಾವಾಗ’ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.
ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ‘ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ’ ಮತ್ತು ‘ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ’ವು ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡಿದ 98ನೇ ವರ್ಷದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
‘ಸಂವಿಧಾನದ ಮೂಲತತ್ವಗಳನ್ನು ಬದಲಿಸಲಾಗದೆಂಬ ನಂಬಿಕೆಯಿತ್ತು. ಈಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮೂಲಕ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ. 11 ರಾಜ್ಯಗಳಲ್ಲಿ 3.97 ಕೋಟಿ ಮತದಾರರು ಹಕ್ಕು ಕಳೆದುಕೊಂಡಿದ್ದಾರೆ. ದಾಖಲೆಗಳ ಮೂಲಕ ನಾಗರಿಕತ್ವವನ್ನು ಸಾಬೀತು ಮಾಡಬೇಕಿದೆ. ಬಡವರು, ಹಿಂದುಳಿದವರು, ಶೋಷಿತರು ಎಲ್ಲಿಗೆ ಹೋಗಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಂವಿಧಾನದ ಮೂಲಕ ದೇಶದ ಪ್ರತಿ ನಾಗರಿಕನಿಗೂ ಹಕ್ಕು ಕೊಟ್ಟಿದ್ದೇನೆಂದು ಬಾಬಾ ಸಾಹೇಬರು ಸಂತಸ ಪಟ್ಟಿದ್ದರು. ನಾಗರಿಕ ಎಂದೆನಿಸಿಕೊಳ್ಳಲು ಹಕ್ಕು ಇರಬೇಕು. ಕ್ರಮಬದ್ಧವಾಗಿ ಹಕ್ಕುಗಳನ್ನು ಒಂದೊಂದಾಗಿ ಕಸಿಯಲಾಗುತ್ತಿದೆ. ಕೇವಲ ಕರ್ತವ್ಯ ಮಾಡಬೇಕೆಂದು ಪ್ರಧಾನಿ ಹೇಳುತ್ತಿದ್ದಾರೆ’ ಎಂದರು.
‘ಮನೆಯಲ್ಲಿ ಮನುವಾದ ಬಾಯಲ್ಲಿ ಭೀಮವಾದ ಹೇಳುವುದರಿಂದ ಯಾವುದೇ ಪ್ರಯೋಜನವಾಗದು. ಮನುಸ್ಮೃತಿ ಮತ್ತೆ ಚಿಗುರುತ್ತಿದೆ. ಬಹುಜನರ ಮೇಲೆ ಗದಾಪ್ರಹಾರವನ್ನು ಮನುವಾದಿಗಳು ನಡೆಸಿದ್ದಾರೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಅವರ ಕೈಯಲ್ಲಿಯೇ ಇದ್ದು, ಎಲ್ಲರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಅವನತಿ ಕಾಲ ಹತ್ತಿರದಲ್ಲಿದೆ’ ಎಂದು ಎಚ್ಚರಿಸಿದರು.
‘ಒಳಮೀಸಲಾತಿ ಅನುಷ್ಠಾನದಲ್ಲೂ ಮನುಸ್ಮೃತಿ ಕೆಲಸ ಮಾಡಿದೆ. ಒಂದು ಸಮಾಜವು ನಮ್ಮಿಂದ ಶಾಶ್ವತವಾಗಿ ದೂರ ಹೋಗಿಬಿಟ್ಟಿದೆ. ಒಂದೊಂದು ಸಮುದಾಯವನ್ನು ಏಕಾಂಗಿಯಾಗಿಸುವ ಕೆಲಸ ನಡೆದಿದೆ. ಎಳೆಎಳೆಯಾಗಿ ಛಿದ್ರಗೊಳಿಸಲಾಗುತ್ತಿದೆ. ಜಾಗೃತರಾಗದಿದ್ದರೆ ಹಕ್ಕು– ಅಧಿಕಾರವು ಶಾಶ್ವತವಾಗಿ ಸಮಾಧಿಯಾಗುತ್ತದೆ’ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಗೌತಮ ಸಹಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಸ್.ರಂಗನಾಥಯ್ಯ, ದಸಂಸ ಹೋರಾಟಗಾರ ಹರಿಹರ ಆನಂದಸ್ವಾಮಿ, ರಂಗಕರ್ಮಿ ಎಚ್.ಜನಾರ್ಧನ್, ವಕೀಲ ತಿಮ್ಮಯ್ಯ ಅವರನ್ನು ಅಭಿನಂದಿಸಲಾಯಿತು.
ಲೇಖಕ ಶಿವಸುಂದರ್, ಸಮಿತಿ ಅಧ್ಯಕ್ಷ ಎನ್.ಭಾಸ್ಕರ್, ವಿಮರ್ಶಕ ಪ್ರೊ.ಕಾಳೇಗೌಡ ನಾಗವಾರ, ಪರಿಶಿಷ್ಟಜಾತಿ– ಪಂಗಡ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ, ಲೇಖಕ ಸಿ.ಹರಕುಮಾರ್, ಸಂಶೋಧಕರ ಸಂಘದ ಉಪಾಧ್ಯಕ್ಷ ಮಲ್ಲೇಶ್ ಬಾಚಹಳ್ಳಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.