ಚ.ಭೀ. ಸೋಮಶೆಟ್ಟಿ ಹಾಗೂ ಶಿವಪುತ್ರಪ್ಪ ಬಡಿಗೇರ
ಮೈಸೂರು: ಇಲ್ಲಿನ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನೀಡಲಾಗುವ ‘ವಚನ ಚಿತ್ರರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ’ಗೆ 2024ನೇ ಸಾಲಿನಲ್ಲಿ ಶಿವಪುತ್ರಪ್ಪ ಮ. ಬಡಿಗೇರ ಮತ್ತು 2025ನೇ ಸಾಲಿಗೆ ಚ.ಭೀ. ಸೋಮಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ ₹ 68ಸಾವಿರ, ಸ್ವಸ್ತಿವಾಚನ ಹಾಗೂ ಫಲಕಗಳನ್ನು ಒಳಗೊಂಡಿದೆ.
ಕರಕುಶಲ ಕಲಾವಿದ ಶಿವಪುತ್ರಪ್ಪ ಧಾರವಾಡದಲ್ಲಿ ನೆಲಸಿದ್ದಾರೆ. ದೇವತೆಗಳು ಹಾಗೂ ಅಲಂಕಾರಿಕ ಮೂರ್ತಿಗಳ ತಯಾರಿಕೆ, ಮರದ ರಥಗಳ ನಿರ್ಮಾಣ ಹಾಗೂ ಕೆತ್ತನೆ ಕೆಲಸಕ್ಕೆ ಹೆಸರಾದವರು. 40 ವರ್ಷಗಳಿಂದ ಕೆತ್ತನೆ ಅನುಭವ ಇದೆ. ಮಣ್ಣು ಹಾಗೂ ಪ್ಲಾಸ್ಟರ್ನಲ್ಲೂ ಕಲಾಕೃತಿಗಳನ್ನು ರಚಿಸಿದ್ದಾರೆ. ಅವರು ಸಿದ್ಧಪಡಿಸಿದ ಮೂರ್ತಿಗಳು ಅನೇಕ ದೇವಸ್ಥಾನಗಳಲ್ಲಿ ಪೂಜೆಗೆ ಒಳಗಾಗುತ್ತಿವೆ.
ಹೈದರಾಬಾದ್ ಮೂಲದ ಚಿತ್ರಕಲಾವಿದ ಚ.ಭೀ. ಸೋಮಶೆಟ್ಟಿ ಬೀದರ್ನಲ್ಲಿ ನೆಲಸಿದ್ದಾರೆ. ಚಿತ್ರಕಲಾ ಶಿಕ್ಷಕರಾಗಿ 33 ವರ್ಷ ಕಾರ್ಯನಿರ್ವಹಿಸಿದ್ದಾರೆ. ಜಲವರ್ಣದಲ್ಲಿ 125 ಕಲಾಕೃತಿಗಳನ್ನು ರಚಿಸಿದ್ದಾರೆ. ಹಲವು ಪುಸ್ತಕ, ಮಾಸಪತ್ರಿಕೆಗಳಿಗೆ ಮುಖಪುಟ ಚಿತ್ರಗಳನ್ನು ಬರೆದಿದ್ದಾರೆ. ಗುರುಬಸವ ಚಿತ್ರಚರಿತ ಹಾಗೂ ಅಮರ ಗಣಂಗಳ ಕಾಯಕ ಚಿತ್ರದರ್ಶನ ಗ್ರಂಥಗಳ ಕಲಾವಿದರು. ಬಸವಾದಿ ಶರಣರ 200ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ರಚಿಸಿದ ಹೆಗ್ಗಳಿಕೆ ಅವರದು.
ಕಲಾ ಸಾಧಕರನ್ನು ಪ್ರೋತ್ಸಾಹಿಸಲು ‘ಮೈಸೂರು ಟಾಯ್ಸ್ ಕಂಪನಿ’ಯ ಸ್ಥಾಪಕ, ಚಿತ್ರಕಲಾವಿದರಾಗಿದ್ದ ಎಂ. ವೀರಪ್ಪ ಅವರ ಹೆಸರಿನಲ್ಲಿ ಪುತ್ರ ಪ್ರಫುಲ್ಲಚಂದ್ರ ಹಾಗೂ ಮೊಮ್ಮಗ ಸತೀಶ್ ಪ್ರಫುಲ್ಲಚಂದ್ರ ಅವರು ಜೆಎಸ್ಎಸ್ ಮಹಾವಿದ್ಯಾಪೀಠದಲ್ಲಿ ದತ್ತಿ ಸ್ಥಾಪಿಸಿದ್ದಾರೆ. ಅದರಲ್ಲಿ 2015ರಿಂದಲೂ ಶ್ರೇಷ್ಠ ಕಲಾವಿದರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಹಾವಿದ್ಯಾಪೀಠದ ಪ್ರಕಟಣ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.