ADVERTISEMENT

ನಾವು ಮುಂಬೈಗೆ ಹೋಗಲು ನೀವೇ ಕಾರಣ: ಕುಮಾರಸ್ವಾಮಿ ಹೇಳಿಕೆಗೆ ವಿಶ್ವನಾಥ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 8:28 IST
Last Updated 5 ಜನವರಿ 2023, 8:28 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ‘ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿ ವಂಚಿಸಿರುವ ಪ್ರಕರಣದ ಆರೋಪಿ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಜತೆ ಹಲವು ಸಚಿವರು ನಂಟು ಹೊಂದಿದ್ದಾರೆ. ನನ್ನ ಸರ್ಕಾರ ಉರುಳಿಸಲು 17 ಮಂದಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಯಾರು?’ ಎಂಬ ಜೆಡಿಎಸ್‌ ಶಾಸಕಾಂಗ ‍ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ವಿಧಾನಪರಿಷತ್ ಬಿಜೆಪಿ ಸದಸ್ಯ ಎ.ಎಚ್.ವಿಶ್ವನಾಥ್ ಇಲ್ಲಿ ಗುರುವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿಯು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ರಾಜಕಾರಣದ ಕುಟುಂಬದಿಂದ ಬಂದವರು. ಅಂಥವರು ಕೀಳುಮಟ್ಟದ ಹೇಳಿಕೆ ಕೊಡುವುದು ಸರಿಯಲ್ಲ. ನಾವು ಮುಂಬೈಗೆ ಹೋಗಲು ನೀವೇ, ನಿಮ್ಮ ವೈಫಲ್ಯವೇ ಕಾರಣ. ಅದನ್ನು ಮುಚ್ಚಿಕೊಳ್ಳಲು, ಬೇರೆಯವರ ಮೇಲೆ ಮಸಿ ಬಳಿಯಲು ಹಿಟ್ ಅಂಡ್ ರನ್ ಹೇಳಿಕೆ ಕೊಡುತ್ತಿದ್ದೀರಿ’ ಎಂದು ಕಿಡಿಕಾರಿದರು.

‘ಮುಂಬೈಗೆ ಶಾಸಕರೊಂದಿಗೆ ಕಳುಹಿಸಲಾಗಿದ್ದ ಹುಡುಗಿಯರು ಯಾರು, ಆ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ. ಮಸಿ ಬಳಿದು ಹೋಗುವುದು ನಾಯಕನ ಗುಣಲಕ್ಷಣವಲ್ಲ. ಸಿನಿಮಾದವರಾದ ನೀವು ಕಲ್ಪನಾ ಲಹರಿಯಲ್ಲಿ ಹೇಳಬಾರದು’ ಎಂದು ತಿರುಗೇಟು ನೀಡಿದರು.

ADVERTISEMENT

‘ಅವರು ಹೇಳಿರುವುದು ಕಟ್ಟು ಕಥೆ. ಯಾರೋ ಪಿಂಪ್ ಮಾತು ಕೇಳಿ ಹೇಳಿಕೆ ಕೊಡಬಾರದು. ಸರ್ಕಾರ ಬಿದ್ದಾಗಿನಿಂದ ಈವರೆಗೆ ಏನು ಮಾಡುತ್ತಿದ್ದಿರಿ, ಹಿಂದೆಯೇ ಹೇಳಲಿಲ್ಲವೇಕೆ?’ ಎಂದು ಕೇಳಿದರು.

‘ನಿಮ್ಮ ದುರಂಹಕಾರ, ನಿಮ್ಮ ವರ್ತನೆ ಸಹಿಸಲಾಗದೆ ನಾವೆಲ್ಲರೂ ಬಿಜೆಪಿಗೆ ಹೋದೆವು. ಈಗ ಬೇಜವಾಬ್ದಾರಿಯಿಂದ ಮಾತನಾಡುತ್ತೀರಾ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.