ADVERTISEMENT

'ಕಾಂಗ್ರೆಸ್‌ ಟೀಕಿಸಲು ಬಿಜೆಪಿಯಿಂದ ಎಚ್‌ಡಿಕೆಗೆ ಸುಪಾರಿ'-ಎಂ.ಲಕ್ಷ್ಮಣ

ನೀರಾವರಿ ಯೋಜನೆಗಳಿಗೆ ಜೆಡಿಎಸ್‌ ಕೊಡುಗೆ ಏನು?- ಕೆಪಿಸಿಸಿ ವಕ್ತಾರ ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 9:26 IST
Last Updated 2 ಜನವರಿ 2022, 9:26 IST
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ   

ಮೈಸೂರು: ‘ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಜೆಡಿಎಸ್‌ನ ಕೊಡುಗೆ ಏನು ಎಂಬುದನ್ನು ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಲಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕದಲ್ಲಿ ನೀರಾವರಿ ಯೋಜನೆಗಳಿಗೆ ಎಚ್‌.ಡಿ.ದೇವೇಗೌಡ ಅವರ ಕೊಡುಗೆ ಅಗಣಿತ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದೇವೇಗೌಡ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ’ ಎಂದು ಕಿಡಿಕಾರಿದರು.

‘ರಾಜ್ಯದಲ್ಲಿ ಒಟ್ಟು 26 ಅಣೆಕಟ್ಟೆಗಳು ಇವೆ. ಅವುಗಳಲ್ಲಿ 21 ಕೂಡಾ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಿರ್ಮಾಣ ಆಗಿವೆ. ಕೆಆರ್‌ಎಸ್‌ ಅನ್ನು ನಾಲ್ವಡಿ ಕೃಷರಾಜ ಒಡೆಯರ್‌ ನಿರ್ಮಿಸಿದ್ದರೆ, ಇನ್ನುಳಿದ ನಾಲ್ಕು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಆಗಿವೆ. ಜೆಡಿಎಸ್‌ ಅವಧಿಯಲ್ಲಿ ಅಣೆಕಟ್ಟೆ ಅಲ್ಲ, ಒಂದು ಚಿಕ್ಕ ಕೆರೆಯನ್ನಾದರೂ ನಿರ್ಮಿಸಿದ್ದರೆ ಅದನ್ನು ತೋರಿಸಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಬಿಜೆಪಿ ಜತೆ ಸೇರಿಕೊಂಡು ಕಾಂಗ್ರೆಸ್‌ಅನ್ನು ಟೀಕಿಸುತ್ತಿದ್ದಾರೆ. ಜೆಡಿಎಸ್‌ ಬಿಜೆಪಿಯ ಅಂಗ ಪಕ್ಷವೇ? ಕಾಂಗ್ರೆಸ್‌ ಟೀಕಿಸಲು ಕುಮಾರಸ್ವಾಮಿ ಅವರು ಬಿಜೆಪಿಯಿದ ಸುಪಾರಿ ತೆಗೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.