ಮೈಸೂರು: ‘ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅಪಘಾತ, ಸಾವು–ನೋವು ಸಂಭವಿಸುತ್ತಿದ್ದು, ಇದು ಕಿಲ್ಲರ್ ಎಕ್ಸ್ಪ್ರೆಸ್ ವೇ ಆಗಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.
‘ಇಲ್ಲಿ ವಾಹನ ಸಂಚಾರ ಆರಂಭವಾಗಿ ಆರು ತಿಂಗಳೊಳಗೆ ಅಪಘಾತ ಸಂಖ್ಯೆ ಹೆಚ್ಚಳವಾಗಿದ್ದು, 84ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಸೆಪ್ಟೆಂಬರ್ನಿಂದ ಹೊಸ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಅಲ್ಲಿಂದ ಈವರೆಗೆ 335ಕ್ಕೂ ಹೆಚ್ಚು ಅಪಘಾತ ಪ್ರಕರಣ ವರದಿಯಾಗಿವೆ. ಹೆದ್ದಾರಿ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್, ಜನವರಿ ತಿಂಗಳಲ್ಲೇ ಹೆಚ್ಚು ಅಪಘಾತಗಳು ವರದಿಯಾಗಿವೆ’ ಎಂದು ತಿಳಿಸಿದರು.
‘ಈ ಹೆದ್ದಾರಿಯುದ್ದಕ್ಕೂ ರೈತರು ಸೇರಿದಂತೆ 2 ಲಕ್ಷ ಜನರಿಗೆ ಅನಾನುಕೂಲ ಆಗುತ್ತಿದೆ’ ಎಂದು ದೂರಿದರು.
‘ಹಿಂದೆ ಈ ಹೆದ್ದಾರಿಯಲ್ಲಿ 53ಸಾವಿರ ವಾಹನಗಳು ಸಂಚರಿಸುತ್ತಿದ್ದವು. ಈಗ ಅವುಗಳ ಸಂಖ್ಯೆ 90ಸಾವಿರ ದಾಟಿದೆ. ಅವೈಜ್ಞಾನಿಕವಾಗಿ ಟೋಲ್ ನಿಗದಿಪಡಿಸಲಾಗಿದೆ. ಗುತ್ತಿಗೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತಿದ್ದು, ಸಾಕಷ್ಟು ಕಮಿಷನ್ ಕೂಡ ಪಡೆಯಲಾಗುತ್ತಿದೆ’ ಎಂದು ಆರೋಪಿಸಿದರು.
‘ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಯೋಜನೆಗಾಗಿ ಡಿಪಿಆರ್ಗೆ ₹ 6.50 ಕೋಟಿ ಸೇರಿದಂತೆ ಒಟ್ಟು ₹ 13 ಕೋಟಿ ಕೊಟ್ಟಿದ್ದಾರೆ. ಇದಕ್ಕೆ ದಾಖಲೆಗಳಿವೆ. ಒಂಬತ್ತೂವರೆ ಪೈಸೆಯನ್ನೂ ಕೊಟ್ಟಿಲ್ಲ ಎನ್ನುವ ಪ್ರತಾಪ ಸಿಂಹ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.