ಮೈಸೂರು: ‘ಮನುಷ್ಯತ್ವವೇ ಚೂರು ಚೂರಾಗಿರುವ, ದ್ವೇಷದ ದಳ್ಳುರಿಯೇ ದಹನವಾಗುವ ಕಾಲಘಟ್ಟದಲ್ಲಿ ಭಾವಗೀತೆಗಳು ಮನಸ್ಸುಗಳನ್ನು ಒಗ್ಗೂಡಿಸಲಿವೆ’ ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ತಿಳಿಸಿದರು.
ಚಾಮರಾಜನಗರದ ರಂಗತರಂಗ ಟ್ರಸ್ಟ್ ಭಾನುವಾರ ಮುಸ್ಸಂಜೆ ನಗರದಲ್ಲಿ ಆಯೋಜಿಸಿದ್ದ 21ನೇ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆ–2019ರ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಯುವಕರೇ ದೇಶದ ಶಕ್ತಿ. ಆದರೆ ಸೂಕ್ತ ಮಾರ್ಗದರ್ಶನವಿಲ್ಲದೆ ಈ ಶಕ್ತಿ ವ್ಯಯವಾಗುತ್ತಿದೆ. ಒಡೆದಿರುವ ಯುವ ಸಮೂಹದ ಭಾವ ಒಗ್ಗೂಡಿಸಬೇಕಿದೆ’ ಎಂದು ಹೇಳಿದರು.
‘ಸುಗಮ ಸಂಗೀತ, ಭಾವಗೀತೆ ಗಾಯನ ಹೃದಯಕ್ಕೆ ತಂಪೆರೆಯುವ ತಂಗಾಳಿಯಿದ್ದಂತೆ. ಮನಸ್ಸನ್ನು ಪ್ರಫುಲ್ಲಗೊಳಿಸುವ ಗೀತೆಗಳಿವು. ನೆಲಮೂಲದ ಸಂಸ್ಕೃತಿಯನ್ನು ಮಕ್ಕಳಲ್ಲಿ ಮೂಡಿಸುವ ಜತೆಯಲ್ಲೇ, ಭಾವವನ್ನು ನಮ್ಮದಾಗಿಸಿಕೊಂಡು ಬೆಳಕಿನೆಡೆಗೆ ಹೆಜ್ಜೆ ಹಾಕಬೇಕಿದೆ’ ಎಂದರು.
ಹಿರಿಯ ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ವಿಜೇತರಿಗೆ ಬಹುಮಾನ ವಿತರಿಸಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ತೀರ್ಪುಗಾರರಾದ ಎ.ಎಸ್.ಪ್ರಸನ್ನಕುಮಾರ್, ಭುವನೇಶ್ವರಿ ವೆಂಕಟೇಶ್, ರಂಗ ತರಂಗದ ಅಂಬಳೆ ಸಿದ್ದರಾಜು ಉಪಸ್ಥಿತರಿದ್ದರು. ವಿದ್ವಾಂಸ ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ್ ಸ್ವಾಗತಿಸಿದರು.
ವಿಜೇತರು: ಹಿರಿಯರ ವಿಭಾಗದಲ್ಲಿ ಎನ್.ಶಶಾಂಕ್, ಹೃತ್ವಿಕ್ ಸಿ.ರಾಜ್, ಅಮೂಲ್ಯ ಆರ್.ಭಟ್, ಎ.ಎಸ್.ರವಿಪ್ರಕಾಶ್, ಶ್ರದ್ಧಾ ಕುಟ್ನಿಕರ್ ಕ್ರಮವಾಗಿ ಮೊದಲ ಐದು ಸ್ಥಾನ ಗಳಿಸಿದರೆ, ಕಿರಿಯರ ವಿಭಾಗದಲ್ಲಿ ಎಚ್.ವಿ.ಶಮಾ, ತನಿಷ್ಕಾ ಎಸ್.ವರ್ಣೇಕರ್, ಎ.ಅದಿತಿ, ಎಚ್.ರಕ್ಷಾರಾವ್ ಮೊದಲ ನಾಲ್ಕನೇಸ್ಥಾನ ಗಳಿಸಿದರೆ, ಚಾಮರಾಜನಗರದ ಸಿರಿಶೆಟ್ಟಿ ಐದನೇ ಸ್ಥಾನ ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.