ಮೈಸೂರಿನ ಸಿಎಫ್ಟಿಆರ್ಐನಲ್ಲಿ ಶುಕ್ರವಾರ ಆರಂಭವಾದ ‘ಗೌಪ್ಯ ಹಸಿವು’ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ವಿಜ್ಞಾನಿ ಡಾ.ಶಶಿಕಿರಣ್ ಬೊಯಿಂದಲಾ ಉದ್ಘಾಟಿಸಿದರು.
ಮೈಸೂರು: ‘ಸೂಕ್ಷ್ಮ ಪೋಷಕಾಂಶಗಳು ಜನರಿಗೆ ಸಿಗುತ್ತಿಲ್ಲ. ಇದು ಸಾರ್ವಜನಿಕ ಆರೋಗ್ಯ ಹಾಗೂ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದೆ. ಶೋಷಿತ ಹಾಗೂ ಹಿಂದುಳಿದ ಸಮುದಾಯದವರಿಗೆ ಸಾರ ವರ್ಧಿತ ಪೌಷ್ಟಿಕ ಆಹಾರ ತಲುಪಬೇಕಿದೆ’ ಎಂದು ಭಾರತೀಯ ಪೋಷಕಾಂಶ ಸಂಸ್ಥೆಯ (ಎನ್ಐಎನ್) ನಿವೃತ್ತ ನಿರ್ದೇಶಕ ಡಾ.ಶಶಿಕಿರಣ್ ಬೊಯಿಂದಲಾ ಪ್ರತಿಪಾದಿಸಿದರು.
ಇಲ್ಲಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ಆರಂಭವಾದ ‘ಗೌಪ್ಯ ಹಸಿವು’ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಅಕ್ಕಿಯಲ್ಲಿ ಸಾರವರ್ಧಿತ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಸೇರಿಸಲಾಗುತ್ತಿದೆ. ಆದರೆ, ದೇಶದ ಉತ್ತರ, ಪಶ್ಚಿಮ ಹಾಗೂ ಮಧ್ಯ ಭಾಗದಲ್ಲಿ ಅಕ್ಕಿಯನ್ನು ಬಳಸುವುದೇ ಇಲ್ಲ. ಗೋಧಿಯಲ್ಲಿ ಬೆರೆಸಿ ನೀಡಲು ಯೋಜಿಸಲಾಗಿದೆ. ತಾಂತ್ರಿಕ ಸವಾಲುಗಳು ಹೆಚ್ಚಿವೆ’ ಎಂದರು.
‘ಬದಲಾದ ಜೀವನಶೈಲಿ ಕಾರಣ ಕಾಣಲಾಗದ ಹಸಿವು (ಹಿಡನ್ ಹಂಗರ್) ಸಮಸ್ಯೆ ದೇಶವನ್ನು ಕಾಡುತ್ತಿದೆ. ಹಣ್ಣು– ತರಕಾರಿ, ಸಿರಿಧಾನ್ಯ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಬೋಹೈಡ್ರೇಟ್ ಹೆಚ್ಚು ಇರುವ ಆಹಾರ ಸೇವಿಸಲಾಗುತ್ತಿದೆ. ಇತರ ಸೂಕ್ಷ್ಮ ಪೌಷ್ಟಿಕಾಂಶಗಳೂ ದೇಹಕ್ಕೆ ಅಗತ್ಯವಾಗಿವೆ’ ಎಂದರು.
ಐಐಟಿ ದೆಹಲಿಯ ಪ್ರೊ.ಜತೀಂದ್ರ ಕೆ.ಸಾಹು, ‘ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿರುವ ದೇಶವು ಕಾಣಲಾಗದ ಹಸಿವು (ಹಿಡನ್ ಹಂಗರ್) ಸಮಸ್ಯೆಯನ್ನು ಎದುರಿಸುತ್ತಿದೆ. 3.3 ಬಿಲಿಯನ್ ಟನ್ ಕೃಷಿ ಉತ್ಪಾದನೆಯಿದ್ದರೂ ಪೌಷ್ಟಿಕ ಆಹಾರ ಎಲ್ಲರಿಗೂ ಸಿಗುತ್ತಿಲ್ಲ’ ಎಂದರು.
‘ಮಕ್ಕಳಿಗೆ ಪೌಷ್ಟಿಕಾಂಶ ಸಿಗುವಂತೆ ಮಾಡಲು ಫೋರ್ಟಿಫಿಕೇಶನ್ ಮಾಡಿದ ಅಕ್ಕಿಯನ್ನು ನೀಡಲಾಗುತ್ತಿದೆ. ಪೌಷ್ಟಿಕ ಪದಾರ್ಥವನ್ನು ಅಕ್ಕಿ ಮಾದರಿಯಲ್ಲಿಯೇ ತಯಾರಿಸಿ ಪಡಿತರ ಅಕ್ಕಿಗೆ ಸೇರಿಸಿ ವಿತರಣೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ವಿಜ್ಞಾನಿ ಪ್ರೊ.ರೀನಾ ದಾಸ್ ಮಾತನಾಡಿ, ‘ದಶಕದ ಹಿಂದೆ ಫುಡ್ ಫೋರ್ಟಿಫಿಕೇಶನ್ ಬಗ್ಗೆ ಅರಿವು ಇರಲಿಲ್ಲ. ಈಗ ಪಡಿತರ ಅಕ್ಕಿಯ ಜೊತೆ ಸೇರಿಸಿ ಕೊಡಲಾಗುತ್ತಿದೆ. ಹಿಡನ್ ಹಂಗರ್ ಅನ್ನು ಸಂಪೂರ್ಣ ತೊಡೆದುಹಾಕಬೇಕಿದೆ’ ಎಂದರು.
‘ಎನ್ಜೆಂಡರ್ ಹೆಲ್ತ್’ ಸಂಸ್ಥೆಯ ನಿರ್ದೇಶಕ ಡಾ.ಅಜಯ್ ಕುಮಾರ್ ಖೇರಾ, ಸಂಸ್ಥೆಯ ನಿರ್ದೇಶಕಿ ಪ್ರೊ.ಶ್ರೀದೇವಿ ಅನ್ನಪೂರ್ಣ ಸಿಂಗ್, ವಿಜ್ಞಾನಿ ಪ್ರೊ.ಗಿರಿಧರ್ ಪರ್ವತಂ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.