ADVERTISEMENT

ಕೊಲೆ ಮಾಡದಿದ್ದರೂ 2 ವರ್ಷ ಜೈಲು: ಆದಿವಾಸಿ ಕುಟುಂಬದೊಂದಿಗೆ ಪೊಲೀಸರ ‘ಚೆಲ್ಲಾಟ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 6:33 IST
Last Updated 5 ಏಪ್ರಿಲ್ 2025, 6:33 IST
<div class="paragraphs"><p>ಕುಟುಂಬದೊಂದಿಗೆ ನ್ಯಾಯಾಲಯದ ಹೊರಗೆ ಕುಳಿತ ಸುರೇಶ್</p></div>

ಕುಟುಂಬದೊಂದಿಗೆ ನ್ಯಾಯಾಲಯದ ಹೊರಗೆ ಕುಳಿತ ಸುರೇಶ್

   

ಚಿತ್ರ: ಇನ್‌ಸ್ಟಾಗ್ರಾಂ

ಮೈಸೂರು: ‘ಕೊಲೆಯಾಗಿದ್ದಾರೆ’ ಎನ್ನಲಾಗಿದ್ದ ಕುಶಾಲನಗರ ಮಹಿಳೆ ಮಲ್ಲಿಗೆಯು ತಮ್ಮ ಪ್ರಿಯಕರನೊಂದಿಗೆ ಪತ್ತೆಯಾಗಿರುವುದರಿಂದ, ಅವರದ್ದೆಂದು ಹೇಳಲಾಗಿದ್ದ ಮೃತದೇಹ ಯಾರದ್ದು ಎಂಬ ಪ್ರಶ್ನೆ ಉದ್ಭವಿಸಿದೆ. ಕೊಲೆ ಮಾಡಿರದಿದ್ದರೂ 2 ವರ್ಷ ಜೈಲುಪಾಲಾಗಿದ್ದ ಪತಿ ಸುರೇಶ್‌ ಬಗ್ಗೆ ಅನುಕಂಪ ಹಬ್ಬುತ್ತಿದೆ.

ADVERTISEMENT

ಇದು ‘ಜೇನುಕುರುಬ’ ಆದಿವಾಸಿ ಸಮುದಾಯದ ಕುಟುಂಬವಾದ್ದರಿಂದ ‘ಮುಂದೆ ನಮಗೇನು ಸಮಸ್ಯೆ ಆಗುವುದಿಲ್ಲ’ ಎಂದು ಭಾವಿಸಿದ ಪೊಲೀಸರು, ಪ್ರಕರಣದುದ್ದಕ್ಕೂ ನಿರ್ಲಕ್ಷ್ಯ ವಹಿಸುತ್ತಲೇ ಹೋದದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಚೆಲ್ಲಾಟವಾಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪೊಲೀಸರ ವರದಿಯಲ್ಲಿ ಗೊಂದಲಗಳು ಕಂಡುಬಂದಿವೆ. ಕರ್ತವ್ಯಲೋಪವೂ ಎದ್ದು ಕಾಣುತ್ತಿದೆ. ಪ್ರಕರಣದಲ್ಲಿ ತನಿಖಾಧಿಕಾರಿಗಳ ಕೈವಾಡವಿದೆಯೇ ಎಂಬ ಅನುಮಾನವೂ ಮೂಡಿದೆ.

2020ರ ನವೆಂಬರ್‌ 12ರಂದು ಬೆಟ್ಟದಪುರದಲ್ಲಿ ಸಿಕ್ಕಿದ್ದ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ‘ಬಲವಾದ ಏಟಿನಿಂದ ಮೃತಪಟ್ಟಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಅದು ಕೊಲೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಆ ಮೃತದೇಹದ ಹಿಂದಿನ ಕಥೆಯೇನು, ಕೊಂದವರಾರು, ಬಳಿಕ ಆ ಪ್ರಕರಣ ಮುಚ್ಚಿಡಲು ಸುರೇಶ್‌ ಹಾಗೂ ಮಲ್ಲಿಗೆ ಅವರನ್ನು ಅಸ್ತ್ರವಾಗಿ ಬಳಸಲಾಯಿತೇ ಎಂಬ ಪ್ರಶ್ನೆಯೂ ಮೂಡಿದೆ.

2020ರ ನವೆಂಬರ್‌ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ಕುಶಾಲನಗರ ಠಾಣೆಯಲ್ಲಿ ಸುರೇಶ್‌ ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್‌ ಎಂಬಾತನೇ ಕಾರಣ ಎಂದು ತಿಳಿಸಿದ್ದರೂ, ಬೆಟ್ಟದಪುರದ ಪೊಲೀಸರು ಸುರೇಶ್‌ ಅವರನ್ನೇ ಆರೋಪಿಯನ್ನಾಗಿಸಿದ್ದಾರೆ. ಆ ಬಳಿಕ, ಮಲ್ಲಿಗೆಯ ತಾಯಿ ಗೌರಿ ಅವರೂ ‘ಮಗಳು ಕೊಲೆಯಾಗಿದ್ದಾಳೆ’ ಎಂದು ದೂರು ನೀಡಿದ್ದರು. ಅದನ್ನು ಆಧರಿಸಿದ ಎಫ್‌ಐಆರ್‌ನಲ್ಲಿ ಅಪರಿಚಿತ ವ್ಯಕ್ತಿ ಎಂದೇ ಉಲ್ಲೇಖಿಸಲಾಗಿತ್ತು. ಸುರೇಶ್‌ ಅವರ ಹೆಸರು ಇರಲಿಲ್ಲ.

ವರ್ಗಾವಣೆ ಬಗ್ಗೆಯೂ ಸಂಶಯ: 

ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಬಿ.ಜಿ.ಪ್ರಕಾಶ್‌, ಈಗ ಕುಶಾಲನಗರ ಠಾಣೆಯಲ್ಲೇ ಇನ್‌ಸ್ಪೆಕ್ಟರ್‌ ಆಗಿ ಕರ್ತವ್ಯದಲ್ಲಿದ್ದಾರೆ. ಈ ವರ್ಗಾವಣೆಯ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ.

‘ಕೊಲೆ ಮಾಡದ ಸುರೇಶ್‌ ಬಳಿ ಪೊಲೀಸರು 2022ರ ಮೇ 22ರಂದು ಸ್ವ ಇಚ್ಛಾ ಹೇಳಿಕೆ ಬರೆಸಿಕೊಂಡಿರುವುದು ಕರ್ತವ್ಯ ಲೋಪಕ್ಕಿರುವ ಪ್ರಮುಖ ಸಾಕ್ಷಿ’ ಎನ್ನಲಾಗಿದೆ.

ಅಲ್ಲಿ ‘ನಾನು ಹೆಂಡತಿಯು ಮನೆ ಬಿಟ್ಟು ಹೋದ ಮೇಲೆ ದ್ವೇಷದಿಂದ ಇದ್ದೆ. ಆಕೆ ಮನೆಗೆ ಬಂದ ಬಳಿಕ ಪುಸಲಾಯಿಸಿ, ಕುಶಾಲನಗರದ ಬಾರ್‌ನಲ್ಲಿ ಇಬ್ಬರೂ ಮದ್ಯ ಸೇವಿಸಿ ನಂತರ ಶ್ಯಾನುಭೋಗನಹಳ್ಳಿಗೆ ಕರೆದೊಯ್ದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದೆ’ ಎಂದು ಉಲ್ಲೇಖಿಸಲಾಗಿದೆ.

ಅಪರಾಧವೇ ಮಾಡದ ವ್ಯಕ್ತಿಯಿಂದ ಪೊಲೀಸರು ಹೇಗೆ ಸ್ವ ಇಚ್ಛಾ ಹೇಳಿಕೆ ಬರೆಸಿದರು? ಪೊಲೀಸರ ಚಿತ್ರಹಿಂಸೆಗಾಗಿ ಸುರೇಶ್‌ ಅಪರಾಧವನ್ನು ಒಪ್ಪಿಕೊಂಡರೇ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ.

17ರಂದು ವಿಚಾರಣೆ:

ವಕೀಲ ಪಾಂಡು ಪೂಜಾರಿ ಅವರು ಸಲ್ಲಿಸಿದ ವಿಶೇಷ ಅರ್ಜಿಯನ್ನು ಪರಿಗಣಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು, ಮಲ್ಲಿಗೆ, ಎಸ್‌ಪಿ ವಿಷ್ಣುವರ್ಧನ್‌ ಹಾಗೂ ತನಿಖಾಧಿಕಾರಿ ಪ್ರಕಾಶ್‌ ಅವರ ವಿಚಾರಣೆ ನಡೆಸಿ, ಹೇಳಿಕೆಗಳ ವಿಡಿಯೊ ದಾಖಲಿಸಿದೆ. ಪೊಲೀಸರ ನಡೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದು, ‘ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ’ ಎಸ್‌ಪಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ. ಏ.17ರಂದು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ತನಿಖೆಯ ಸಾಧ್ಯತೆಗಳೇನು?

‘ಹಿಂದೆ ಪತ್ತೆಯಾದ ಮಹಿಳೆಯ ಶವ ಯಾರದ್ದು ಎಂಬುದನ್ನು ತನಿಖೆಯ ಮೂಲಕ ತಿಳಿಯಲು ಸಾಧ್ಯ. ಮೃತದೇಹದ ಡಿಎನ್‌ಎ ವರದಿಯನ್ನು ಆಧರಿಸಿ ಆ ಸಮಯದಲ್ಲಿ ಕಾಣೆಯಾಗಿ, ಪತ್ತೆಯಾಗದ ಮಹಿಳೆಯರ ಮಾಹಿತಿ ಪಡೆದು ತನಿಖೆ ನಡೆಸಲಿದ್ದೇವೆ. ಸುಳ್ಳು ವರದಿ ನೀಡಿರುವ ಬಗ್ಗೆ ಇಲಾಖಾ ಮಟ್ಟದಲ್ಲಿ ವಿಚಾರಣೆ ನಡೆಸಿ, ಶಿಕ್ಷೆಯಾಗಲಿದೆ. ನ್ಯಾಯಾಲಯಕ್ಕೂ ವರದಿ ನೀಡಲಾಗುವುದು’ ಎಂದು ಹೆಚ್ಚುವರಿ ಎಸ್‌ಪಿ ಮಲಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಡುಗಡೆಗೂ ಪೊಲೀಸರ ಸಹಾಯ!

ಪೊಲೀಸರ ತಪ್ಪಿನಿಂದ ಜೈಲುವಾಸ ಅನುಭವಿಸಿದ ಸುರೇಶ್‌, ತಾವು ಜಾಮೀನಿನ ಮೇಲೆ ಬಿಡುಗಡೆಯಾಗಲು ಸಹಾಯ ಮಾಡಿದ ಪೊಲೀಸರನ್ನೂ ನೆನಪಿಸಿಕೊಳ್ಳುತ್ತಾರೆ.

‘ನನ್ನನ್ನು ಜೈಲಿನಿಂದ ಹೊರಕ್ಕೆ ತರಲು ತಂದೆಯು ವಕೀಲರರೊಬ್ಬರನ್ನು ಸಂಪರ್ಕಿಸಿದ್ದರು, ಅವರು ಹಣ ಪಡೆದರೂ ಬಿಡುಗಡೆಗೆ ಪ್ರಯತ್ನಿಸಲಿಲ್ಲ. ಹೀಗಿದ್ದಾಗ, ನನ್ನನ್ನು ಕೋರ್ಟ್‌ಗೆ ಕರೆದೊಯ್ದಿದ್ದ ಎಸ್ಕಾರ್ಟ್‌ ಸಿಬ್ಬಂದಿಗೆ ನನ್ನ ನಿಜ ಕಥೆ ತಿಳಿಸಿದೆ. ಅವರಲ್ಲೊಬ್ಬರು ವಕೀಲರಾದ ಪಾಂಡು ಪೂಜಾರಿಯನ್ನು ಪರಿಚಯಿಸಿದರು’ ಎಂದು ‘‍ಪ್ರಜಾವಾಣಿ’ಗೆ ತಿಳಿಸಿದರು.

ಮಲ್ಲಿಗೆ ಜೀವಂತವಾಗಿರುವುದರಿಂದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸತ್ಯ ಏನೆಂದು ಹೊರಬರಬೇಕು. ನಿರಪರಾಧಿ ಪತಿಗೆ ನ್ಯಾಯ ದೊರಕಬೇಕು.
ಪಾಂಡು ಪೂಜಾರಿ, ಸುರೇಶ್‌ ಪರ ವಕೀಲರು
ಪೊಲೀಸರು ನನ್ನನ್ನೇ ಪ್ರಕರಣದಲ್ಲಿ ಸಿಲುಕಿಸಿದರು. ನಾನು ಕೂಲಿ ಮಾಡಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೆ. ನನ್ನ ಬಂಧನದಿಂದ ಮಕ್ಕಳು ಹಾಗೂ ಅತ್ತೆ ಬಹಳಷ್ಟು ಕಷ್ಟಪಟ್ಟರು‌.
ಸುರೇಶ್‌, ಮಲ್ಲಿಗೆಯ ಪತಿ
ಪತ್ನಿಯನ್ನು ಕೊಲೆ ಮಾಡುವಂತವನಾಗಿದ್ದರೆ ನನ್ನ ಅಳಿಯ ನನ್ನನ್ನು ಇಷ್ಟು ವರ್ಷ ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿರಲಿಲ್ಲ. ಆತ ನಿರಪರಾಧಿ..
ಗೌರಿ, ಮಲ್ಲಿಗೆಯ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.