ADVERTISEMENT

ಪಿರಿಯಾಪಟ್ಟಣ: ಕೆರೆಗಳಲ್ಲಿ ವಲಸೆ ಹಕ್ಕಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 6:39 IST
Last Updated 29 ಜನವರಿ 2024, 6:39 IST
ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಕೆರೆಯಲ್ಲಿ ಕಾಣಿಸಿಕೊಂಡ ಸ್ಪೂನ್ ಬಿಲ್ ಹಕ್ಕಿಗಳು
ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಕೆರೆಯಲ್ಲಿ ಕಾಣಿಸಿಕೊಂಡ ಸ್ಪೂನ್ ಬಿಲ್ ಹಕ್ಕಿಗಳು   

ಪಿರಿಯಾಪಟ್ಟಣ: ತಾಲ್ಲೂಕಿನ ಕಂಪಲಾಪುರ ಮತ್ತು ಹಿಟ್ನೆಹೆಬ್ಬಾಗಿಲು ಕೆರೆಗಳಿಗೆ ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದು, ಪಕ್ಷಿ ಹಾಗೂ ಪರಿಸರಪ್ರಿಯರ ಗಮನ ಸೆಳೆಯುತ್ತಿವೆ.

ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು, ಅನೇಕ ಕೆರೆಗಳು ಬತ್ತಿ ಹೋಗಿವೆ. ಅಲ್ಪಸ್ವಲ್ಪ ನೀರಿರುವ ಕೆರೆಗಳಲ್ಲಿ ವಿದೇಶಿ ಹಕ್ಕಿಗಳ ಕಲರವ ಕೇಳಿಬರುತ್ತಿದೆ.

ಕಂಪಲಾಪುರ, ಹಿಟ್ನೆಹೆಬ್ಬಾಗಿಲು ಕೆರೆಗೆ ಮಧ್ಯ ಏಷ್ಯಾ, ಚೀನಾ, ಜಪಾನ್ ದೇಶಗಳಿಂದ ಸ್ಪೂನ್ ಬಿಲ್, ಗ್ರೀನ್ ವಿಂಗ್ ಟೀಲ್, ಗಡ್ವಾಲ್, ಪೆಲಿಕಾನ್ (ಹೆಜ್ಜಾರ್ಲೆ), ಪೇಂಟೆಡ್ ಸ್ಟಾರ್ಕ್ ಹಕ್ಕಿಗಳು ಬಂದು ಗೂಡು ಕಟ್ಟುತ್ತಿವೆ.

ADVERTISEMENT

ಸಂತಾನೋತ್ಪತ್ತಿಗಾಗಿ ಸಾವಿರಾರು ಕಿಲೋಮೀಟರ್‌ಗಳ ದೂರದಿಂದ ಈ ಹಕ್ಕಿಗಳು ಬಂದಿವೆ. ನವೆಂಬರ್‌ನಲ್ಲಿ ಆಗಮಿಸಿ ಆರು ತಿಂಗಳ ಕಾಲ ಇಲ್ಲಿದ್ದು, ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡುತ್ತವೆ. ಮರಿಗಳು ಹಾರುವ ಸಾಮರ್ಥ್ಯ ಪಡೆದುಕೊಂಡಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ, ಮಳೆಗಾಲ ಪ್ರಾರಂಭವಾಗುವ ಮೊದಲು ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ’ ಎಂದು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಲಸೆ ಹಕ್ಕಿಗಳು ಸಣ್ಣ ಮೀನುಗಳು ಮತ್ತು ಹುಳ ಹುಪ್ಪಟೆಗಳನ್ನು ತಿನ್ನುತ್ತವೆ. ಕೆರೆಯನ್ನು ಶುದ್ಧವಾಗಿ ಇಡಲು ಇವು ಸಹಕಾರಿಯಾಗಿವೆ’ ಎಂದು ಸಾಮಾಜಿಕ ಕಾರ್ಯಕರ್ತ ಪಿ.ಎಸ್.ಹರ್ಷ ಹೇಳಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಕೆರೆಯಲ್ಲಿ ಕಾಣಿಸಿಕೊಂಡ ಪೇಂಟೆಡ್ ಸ್ಟಾರ್ಕ್ ಹಕ್ಕಿಗಳು
ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದ ಕೆರೆಯಲ್ಲಿ ಸ್ಪೂನ್ ಬಿಲ್ ಹಕ್ಕಿಗಳ ಕಲರವ
ವಲಸೆ ಹಕ್ಕಿಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಹಕ್ಕಿಗಳನ್ನು ಬೇಟೆಯಾಡುವುದಕ್ಕೆ ಕಡಿವಾಣ ಹಾಕಬೇಕು.
ಪ್ರಶಾಂತ್ ಕುಮಾರ್ ವನ್ಯಜೀವಿ ಛಾಯಾಗ್ರಾಹಕ
ಸುತ್ತಮುತ್ತಲ ಗ್ರಾಮಸ್ಥರಿಗೆ ವಲಸೆ ಹಕ್ಕಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಪಕ್ಷಿಗಳ ಸಂರಕ್ಷಣೆಗೆ ಒತ್ತು ನೀಡಲಾಗುವುದು.
ಕಿರಣ್ ಕುಮಾರ್ ವಲಯ ಅರಣ್ಯಾಧಿಕಾರಿ ಪಿರಿಯಾಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.