
ತಿ.ನರಸೀಪುರ: ‘ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿ ಹೆಚ್ಚಿನ ಆದಾಯ ಹೊಂದಿ ಆರ್ಥಿಕವಾಗಿ ಸಬಲರಾಗಿ’ ಎಂದು ಬನ್ನೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಕೃಷ್ಣೇಗೌಡ ರೈತರಿಗೆ ಸಲಹೆ ನೀಡಿದರು.
ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರ ಬಳಗದ ಸಹಯೋಗದಲ್ಲಿ ದಿ. ಕೆ.ಕೃಷ್ಣಪ್ಪ ಸ್ಮರಣಾರ್ಥ ಆಯೋಜಿಸಿದ್ದ 5ನೇ ವರ್ಷದ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜೇತರಿಗೆ ನಗದು ಬಹುಮಾನ ಮತ್ತು ಪಾರಿತೋಷಕ ವಿತರಿಸಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಬೇರೆ ಉದ್ಯೋಗದತ್ತ ಒಲವು ತೋರುತ್ತಿದ್ದಾರೆ. ಇದರಿಂದ ಪಶುಸಂಗೋಪನೆ ಪ್ರಮಾಣ ಕುಸಿಯುತ್ತಿದೆ. ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಪಶುವೈದ್ಯ ನಿಶ್ಚಿತ್ ಮಾತನಾಡಿ, ‘ರೈತರು ಹೆಚ್ಚು ಆದಾಯ ಕಾಣಲು ಹೈನುಗಾರಿಕೆ ಸಹಕಾರಿ’ ಎಂದು ಹೇಳಿದರು.
ಸ್ಪರ್ಧೆಗೆ ವಿವಿಧ ಭಾಗಗಳಿಂದ 16 ಹಸುಗಳನ್ನು ಕರೆತಂದಿದ್ದರು. ಅಂತಿಮವಾಗಿ 5 ಹಸುಗಳ ಮಾಲೀಕರಿಗೆ ಬಹುಮಾನ ದೊರೆಯಿತು.
ಮಾದಿಗಹಳ್ಳಿ ನಂದೀಶ್ ಅವರು ₹30 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು. ₹20 ಸಾವಿರ ನಗದು ಮತ್ತು ಟ್ರೋಫಿಯೊಂದಿಗೆ ಬನ್ನೂರು ಮುತ್ತ ಶ್ರೀನಿವಾಸ ಆನಂದ ದ್ವಿತೀಯ, ಮೂರನೇ ಬಹುಮಾನ ₹15 ಸಾವಿರ ನಗದು ಮತ್ತು ಟ್ರೋಫಿಯನ್ನು ಬನ್ನೂರು ಅಜ್ಜಹಳ್ಳಿ ಮಾರಮ್ಮ ಕೃಪೆ ರವಿ ಬಿನ್ ಮಹದೇವ ತಮ್ಮದಾಗಿಸಿಕೊಂಡರು. ನಾಲ್ಕನೇ ಬಹುಮಾನ ₹10 ಸಾವಿರ ನಗದು, ಟ್ರೋಫಿಯನ್ನು ಬನ್ನೂರು ಹೇಮಾದ್ರಿ ಆದಿಶಕ್ತಿ ಮಂಜು ಬಿನ್ ಹಾಲಿನ ಸಿದ್ದಪ್ಪ ಗಳಿಸಿದರು. ಐದನೇ ಬಹುಮಾನ ₹5 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಮೈಸೂರಿನ ಖುಷಿ ಶಶಾಂಕ್ ಪಡೆದುಕೊಂಡರು.
ನಂತರ ಕಾರ್ಯಕ್ರಮದಲ್ಲಿ ಗಣ್ಯರನ್ನು ಡೇರಿ ವತಿಯಿಂದ ಗೌರವಿಸಲಾಯಿತು. ಉಪಾಧ್ಯಕ್ಷ ಬಿ.ಸಿ.ಉಮೇಶ್ ಕುಮಾರ್, ಡಾ.ನಿಶ್ಚಿತ್, ಡಾ.ಉಷಾ, ಡೇರಿ ಮಾಜಿ ಅಧ್ಯಕ್ಷ ಮಾಯಪ್ಪ, ನಿರ್ದೇಶಕರಾದ ಎಂ.ಚಂದ್ರು, ವೆಂಕಟೇಶ್, ಮಹೇಶ್, ನಿಂಗಪ್ಪ, ಶ್ರೀಧರ, ಬಿ.ಎಸ್.ರಾಜೀವ, ರುದ್ರ, ಬಿ.ಎಸ್.ಶಿವಕುಮಾರ್, ಬಿ.ವಿ.ಉಮೇಶ್, ಬಿ.ಕೆ.ಶೋಭಾ, ಸುಶೀಲಾ, ಕಾರ್ಯದರ್ಶಿ ರಾಘು, ಸೋಮ, ಆನಂದ್, ರಾಧಕೃಷ್ಣ, ಬಾಲರಾಜು, ಅತ್ತಳ್ಳಿ ಬಾಬು, ವರದರಾಜು, ಹೊನ್ನೇಗೌಡ, ಎಸ್ಐ ಸಿದ್ದೇಗೌಡ, ರವಿ, ನಂದೀಶ್, ಹಿತೇಶ್, ಅನಿಲ್, ಇಂಟೆಕ್ಸ್ ಮಾಲೀಕ ಆದರ್ಶ, ಹರೀಶ್, ಕಾಳೇಗೌಡ, ಬಿ.ಎಸ್.ರಾಜು, ಹೇಮಾದ್ರಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.