ADVERTISEMENT

ಬಜಾಜ್‌ ಚೇತಕ್‌ನಲ್ಲಿ 56,522 ಕಿ.ಮೀ ಕ್ರಮಿಸಿದ ‘ಆಧುನಿಕ ಶ್ರವಣಕುಮಾರ’

ತಾಯಿಯೊಂದಿಗೆ 20ಕ್ಕೂ ಅಧಿಕ ರಾಜ್ಯಗಳು, 3 ದೇಶಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 3:54 IST
Last Updated 19 ಸೆಪ್ಟೆಂಬರ್ 2020, 3:54 IST
ತಾಯಿ ಚೂಡಾರತ್ನರೊಟ್ಟಿಗೆ ಸಂಕಲ್ಪ ಯಾತ್ರೆ ನಡೆಸಿದ ಮೈಸೂರಿನ ಡಿ.ಕೃಷ್ಣಕುಮಾರ್
ತಾಯಿ ಚೂಡಾರತ್ನರೊಟ್ಟಿಗೆ ಸಂಕಲ್ಪ ಯಾತ್ರೆ ನಡೆಸಿದ ಮೈಸೂರಿನ ಡಿ.ಕೃಷ್ಣಕುಮಾರ್   

ಮೈಸೂರು: ತಂದೆ ದಕ್ಷಿಣಾಮೂರ್ತಿ ಕೊಡಿಸಿದ್ದ ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ‘ಆಧುನಿಕ ಶ್ರವಣಕುಮಾರ’ ಎಂದೇ ಖ್ಯಾತರಾದ ಡಿ.ಕೃಷ್ಣಕುಮಾರ್ (42) ಕ್ರಮಿಸಿದ್ದು 56,522 ಕಿ.ಮೀ. 20ಕ್ಕೂ ಅಧಿಕ ರಾಜ್ಯಗಳು ಹಾಗೂ ನೇಪಾಳ, ಭೂತಾನ್ ಹಾಗೂ ಮ್ಯಾನ್ಮಾರ್‌ ದೇಶಗಳನ್ನು ಸುತ್ತಿ ಬುಧವಾರ ನಗರದ ಸ್ವಗೃಹವನ್ನು ತಾಯಿ ಚೂಡಾರತ್ನಾ (70) ಅವರೊಂದಿಗೆ ತಲುಪಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷ್ಣಕುಮಾರ್, ‘2018ರ ಜನವರಿಯಿಂದ ಇಲ್ಲಿಯವರೆಗೆ ಕೈಗೊಂಡ ‘ಮಾತೃ ಸೇವಾ ಸಂಕಲ್ಪ ಯಾತ್ರೆ’ಯನ್ನು ಪ್ರತಿಕ್ಷಣವೂ ಅನುಭವಿಸಿದ್ದೇನೆ. ಈ ಪುಣ್ಯಭೂಮಿಯಲ್ಲಿ ಜನಿಸಿರುವುದು ನಿಜಕ್ಕೂ ದೊಡ್ಡದು ಎಂಬ ಭಾವನೆ ಮೂಡಿದೆ’ ಎಂದು ಸಂತಸ ಹಂಚಿಕೊಂಡರು.

‘2 ವರ್ಷ 9 ತಿಂಗಳುಗಳ ಕಾಲ ಅಪ್ಪ ಕೊಡಿಸಿದ್ದ ‘ಬಜಾಜ್ ಚೇತಕ್’ ಸ್ಕೂಟರ್‌ನಲ್ಲಿನ ಪ್ರಯಾಣ ಯಾವುದೇ ಕಷ್ಟ ನೀಡಲಿಲ್ಲ. ಅಪ್ಪನೂ ನಮ್ಮೊಂದಿಗೆ ಬರುತ್ತಿದ್ದಾರೆ ಎಂಬ ಭಾವನೆ ಮೂಡಿಸಿತು. ಲಾಕ್‌ಡೌನ್‌ ಆದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ಮಾಡಿ ತಾಯಿಯವರನ್ನು ಜೋಪಾನವಾಗಿ ನೋಡಿಕೊ ಎಂದು ಹೇಳಿ ಭೂತಾನ್‌ನ ಗಡಿಯಲ್ಲಿದ್ದ ನಮಗೆ ವಿಶ್ವಾಸ ತುಂಬಿದರು. ಅಲ್ಲಿಂದ ಹೊರಟು 2 ತಿಂಗಳ ಹಿಂದೆ ರಾಜ್ಯಕ್ಕೆ ಬಂದೆ’ ಎಂದು ಹೇಳಿದರು.

ADVERTISEMENT

‘ಮುಂದೆ ಸ್ವಗೃಹದಲ್ಲಿ ಜ್ಞಾನವಿಕಾಸ ಕೇಂದ್ರವನ್ನು ತೆರೆಯುವ ಯೋಚನೆ ಇದೆ. ಮಕ್ಕಳಿಗೆ ಬಾಲ್ಯದಲ್ಲೇ ವ್ಯಕ್ತಿತ್ವ ನಿರ್ಮಾಣ ಮಾಡುವಂತಹ ಕೆಲಸ ಮಾಡುವೆ’ ಎಂದು ತಿಳಿಸಿದರು.

ಮಹೀಂದ್ರ ಕಂಪನಿಯವರು ಕೃಷ್ಣಕುಮಾರ್ ಅವರಿಗೆ ‘ಮಹೀಂದ್ರ ಕೆಯುವಿ’ ಕಾರನ್ನು ಉಡುಗೊರೆಯಾಗಿ ಶುಕ್ರವಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.