ಮೈಸೂರು: ಜಿಲ್ಲೆಯಲ್ಲಿ ಇನ್ನೂ 90 ಸಾವಿರ ಮಂದಿ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲ. ಇವರಿಗೆ ಕೋವಿಡ್ ಬರುವ ಸಾಧ್ಯತೆ ಲಸಿಕೆ ಪಡೆದವರಿಗಿಂತ 10 ಪಟ್ಟು ಅಧಿಕ. ಹಾಗಾಗಿ, ತಕ್ಷಣವೇ ಇವರು ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮನವಿ ಮಾಡಿದರು.
ಜಿಲ್ಲೆಯಲ್ಲಿ ಶೇ 96.57 ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶೇ 82ರಷ್ಟು ಮಂದಿ 2ನೇ ಡೋಸ್ಲಸಿಕೆ ಪಡೆದಿದ್ದಾರೆ. ಲಸಿಕೆಯನ್ನೇ ಪಡೆಯದವರಿಗೆ ಒಂದು ವೇಳೆ ಕೋವಿಡ್ ಬಂದರೆ ಅವರಿಗೆ ಆಮ್ಲಜನಕದ ಅಗತ್ಯ ಇತರರಿಗಿಂತ 30 ಪಟ್ಟು ಅಧಿಕ ಇದೆ. ನಾವು ಒತ್ತಾಯವಾಗಿ ಲಸಿಕೆ ನೀಡಲು ಸಾಧ್ಯವಿಲ್ಲ. ಹಾಗಾಗಿ, ಎಲ್ಲರೂ ಕೋವಿಡ್ ಲಸಿಕೆ ಪಡೆಯಲು ಮುಂದಾಗಬೇಕು ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾನುವಾರ ಒಂದೇ ದಿನ 60 ಮಕ್ಕಳಿಗೆ ಕೋವಿಡ್ ಬಂದಿದೆ. ಸದ್ಯ, ಮಕ್ಕಳಿಗಾಗಿ 831 ಆಮ್ಲಜನಕಯುಕ್ತ ಬೆಡ್ಗಳನ್ನು ಸಿದ್ಧವಿರಿಸಿಕೊಳ್ಳಲಾಗಿದೆ. ಖಾಸಗಿ ಶಾಲೆಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲೋಪ ಕಂಡು ಬಂದರೆ ಅಂತಹ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಟ್ಟು ಜಿಲ್ಲೆಯಲ್ಲಿ 6,380 ಬೆಡ್ಗಳು ಕೋವಿಡ್ ರೋಗಿಗಳಿಗಾಗಿ ಮೀಸಲಿರಿಸಲಾಗಿದೆ. ಇವುಗಳನ್ನು ಶೇ 20ರಿಂದ ಶೇ 50ರಷ್ಟು ಹೆಚ್ಚಿಸುವ ಅವಕಾಶವೂ ಇದೆ. ಉಂಟಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.