ಮೈಸೂರು: ಹೈಕೋರ್ಟ್ ತೀರ್ಪಿನನ್ವಯ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿದೆ.
ಕೆಲ ದಿನದ ಹಿಂದಷ್ಟೇ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ತೀರ್ಪಿನ ಪ್ರತಿ ಮಂಗಳವಾರ ರಾತ್ರಿ ಮಹಾನಗರ ಪಾಲಿಕೆ ಕಚೇರಿಗೆ ತಲುಪಿತ್ತು.
ಬುಧವಾರ ಬೆಳಿಗ್ಗೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರನ್ನು ಭೇಟಿಯಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಿದರು.
ಚರ್ಚೆಯ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಶಿಲ್ಪಾನಾಗ್, ‘ಮೇಯರ್ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿದೆ. ಜೂನ್ 11ಕ್ಕೆ ಮೇಯರ್ ಚುನಾವಣೆಯನ್ನು ಪ್ರಾದೇಶಿಕ ಆಯುಕ್ತರು ಘೋಷಿಸಿದ್ದಾರೆ. ಅಲ್ಲಿಯ ತನಕ ಉಪ ಮೇಯರ್ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ’ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಸದಸ್ಯರ ಚುನಾವಣೆಯಲ್ಲಿ ರುಕ್ಮಿಣಿ ವಿರುದ್ಧ ಸ್ಪರ್ಧಿಸಿದ್ದ ರಜಿನಿ ಅಣ್ಣಯ್ಯ ಫಲಿತಾಂಶ ಪ್ರಕಟಗೊಂಡ ಬಳಿಕ, ರುಕ್ಮಿಣಿ ತಮ್ಮ ಆದಾಯದ ಮೂಲ ಮುಚ್ಚಿಟ್ಟಿದ್ದಾರೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ನ್ಯಾಯಾಲಯ ಸದಸ್ಯತ್ವವನ್ನೇ ರದ್ದುಗೊಳಿಸಿ, ಎರಡನೇ ಸ್ಥಾನದಲ್ಲಿದ್ದ ರಜಿನಿ ಅವರನ್ನೇ ಸದಸ್ಯರನ್ನಾಗಿ ಪರಿಗಣಿಸಬೇಕು ಎಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಹೈಕೋರ್ಟ್ ಮೊರೆಯೊಕ್ಕಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ರುಕ್ಮಿಣಿ ಸದಸ್ಯತ್ವ ಅನರ್ಹತೆಗೊಳಿಸಿ, ವಾರ್ಡ್ನಲ್ಲಿ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.