
ಮೈಸೂರು: ಇಲ್ಲಿನ ಗೌಸಿಯಾನಗರದಲ್ಲಿ ಯುವಕನೊಬ್ಬನ ಮೇಲೆ ಐವರು ದುಷ್ಕರ್ಮಿಗಳು ದಾಳಿ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.
ಎಂ.ಡಿ.ಶಹಬಾಜ್ (26) ಕೊಲೆಯಾದ ವ್ಯಕ್ತಿ.
ತಡರಾತ್ರಿ 2.30ಕ್ಕೆ ಆಟೊ ಪಾರ್ಕಿಂಗ್ ಶುಲ್ಕ ಪಡೆಯುವಾಗ ಹಳೇ ವೈಷಮ್ಯದಿಂದ ಜುಬೇರ್ ಸೇರಿದಂತೆ ಐವರು ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ಯುವಕನ ಅಣ್ಣ ದೂರು ನೀಡಿದ್ದು, ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿಗಳ ಬಗ್ಗೆ ಸುಳಿವು ದೊರೆತಿದ್ದು, ಅವರ ಪತ್ತೆಗೆ ಮೂರು ತಂಡ ರಚಿಸಿದ್ದೇವೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
‘ಮಂಗಳವಾರ ರಾತ್ರಿ 10ಕ್ಕೆ ಶಹಬಾಜ್ ತನ್ನ ಕಾರ್ಖಾನೆ ಬಂದ್ ಮಾಡಿ, ನಂತರ ಮಾವನ ಆಟೊ ಶೆಡ್ ಬಳಿ ಕುಳಿತಿದ್ದರು. ಆ ಸಮಯದಲ್ಲಿ ದಾಳಿ ನಡೆದಿದೆ. ದಾಳಿ ಮಾಡಿದವರು ಶಹಬಾಜ್ ಪರಿಚಯಸ್ಥರಿಗೆ ಫೈನಾನ್ಸ್ ನೀಡಿ, ಅದರ ಹಣ ನೀಡುವಂತೆ ನಾಲ್ಕು ತಿಂಗಳ ಹಿಂದೆ ಗಲಾಟೆ ಮಾಡಿದ್ದರು. ಅದರ ಬಗ್ಗೆ ಠಾಣೆಗೆ ದೂರು ಸಲ್ಲಿಸಲು ಶಹಬಾಜ್ ತೆರಳಿದ್ದ. ಅದೇ ದ್ವೇಷಕ್ಕೆ ಕೊಲೆ ಮಾಡಿದ್ದಾರೆ. ಆಗ ಪೊಲೀಸರು ಎಫ್ಐಆರ್ ಮಾಡಿಕೊಂಡಿರಲಿಲ್ಲ. ಆಗಲೇ ಪ್ರಕರಣ ದಾಖಲಿಸಿಕೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ’ ಎಂದು ಶಹಬಾಜ್ ಸಂಬಂಧಿಕರು ಮಾಧ್ಯಮದವರ ಎದುರು ನೊಂದು ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.