ಮೈಸೂರಿನ ಚಾಮರಾಜೇಂದ್ರ ಮೃಗಾಲಯ ವೀಕ್ಷಿಸಲು ಪ್ರವಾಸಿಗರು ತೆರಳುತ್ತಿರುವುದು (ಸಂಗ್ರಹ ಚಿತ್ರ)
ಮೈಸೂರು: ಚಾಮರಾಜೇಂದ್ರ ಮೃಗಾಲಯಕ್ಕೆ ದಸರಾ ಸಮಯದಲ್ಲಿ ಜನಸಮೂಹವೇ ಹರಿದು ಬಂದಿದ್ದು, ₹191.37 ಲಕ್ಷ ಸಂಗ್ರಹವಾಗಿದೆ. ಇದು ಹಿಂದಿನ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಗಳಿಕೆಯಾಗಿದೆ.
ನಾಡಹಬ್ಬ ಮೈಸೂರು ದಸರಾದಲ್ಲಿ ಇಲ್ಲಿನ ಪ್ರವಾಸಿ ತಾಣಗಳೂ ತುಂಬಿರುತ್ತವೆ. ಅವುಗಳಲ್ಲಿ ಪ್ರಮುಖ ಸ್ಥಳವಾದ ಮೃಗಾಲಯಕ್ಕೆ ಈ ಬಾರಿ 1.56 ಲಕ್ಷ ವೀಕ್ಷಕರು ಭೇಟಿ ನೀಡಿದ್ದಾರೆ. ಆಯುಧ ಪೂಜೆಯ ದಿನ ಭೇಟಿ ನೀಡಿದ 27, 033 ಜನರಿಂದ ₹33.21 ಲಕ್ಷ ಹಾಗೂ ವಿಜಯದಶಮಿಯಂದು ಭೇಟಿ ನೀಡಿದ 27, 272 ಪ್ರವಾಸಿಗರಿಂದ ₹34.07 ಲಕ್ಷ ಸಂಗ್ರಹವಾಗಿದೆ.
2021ರ ದಸರಾ ಸಮಯದಲ್ಲಿ 75 ಸಾವಿರ ಜನ ಭಾಗವಹಿಸಿದ್ದು, ₹77.63 ಲಕ್ಷ ಸಂಗ್ರಹವಾಗಿತ್ತು. 2022ರಲ್ಲಿ 1.55 ಲಕ್ಷ ಜನ ಭೇಟಿ ನೀಡಿದ್ದು, ₹153.51 ಲಕ್ಷ ಸಂಗ್ರಹವಾಗಿತ್ತು. 2023 ಹಾಗೂ 2024ರಲ್ಲಿ ತಲಾ 1.65 ಲಕ್ಷ ಜನ ಭೇಟಿ ನೀಡಿದ್ದರು. ಕ್ರಮವಾಗಿ ₹167.10 ಲಕ್ಷ, 171.29 ಲಕ್ಷ ಸಂಗ್ರಹವಾಗಿತ್ತು. ದಸರಾ ಮುಗಿದರೂ ಶುಕ್ರವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಪ್ರವಾಸಿಗರು ಭೇಟಿ ನೀಡಿದರು.
‘ದಸರಾ ಹಬ್ಬದ ಸಮಯದಲ್ಲಿ ಈ ಬಾರಿ ದಾಖಲೆಯ ಗಳಿಕೆಯಾಗಿದೆ. ಸ್ವಚ್ಛತೆ ಹಾಗೂ ಶಾಂತಿಯುತವಾಗಿ ಕೆಲಸ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗೂ ಧನ್ಯವಾದ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.