
ಮೈಸೂರು: ನಗರ ಪೊಲೀಸ್ ತಂಡದವರು ಮಂಗಳವಾರ ಇಲ್ಲಿ ಕೊನೆಗೊಂಡ ದಕ್ಷಿಣ ವಲಯ ಮಟ್ಟದ 7ನೇ ಕರ್ತವ್ಯ ಕೂಟದಲ್ಲಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಕೂಟದಲ್ಲಿ ಮೈಸೂರು ನಗರ ಪೊಲೀಸರು 4 ಚಿನ್ನ, 6 ಬೆಳ್ಳಿ ಹಾಗೂ 1 ಕಂಚು ಸೇರಿದಂತೆ 11 ಪದಕ ಗೆದ್ದರು.
ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಹಾಗೂ ಮೈಸೂರು ಜಿಲ್ಲೆಯ ಪೊಲೀಸರು ಕೂಟದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಅತಿ ಹೆಚ್ಚು ಪದಕ ಪಡೆಯುವ ಮೂಲಕ ನಗರ ತಂಡವು ಚಾಂಪಿಯನ್ ಆಗಿ ಹೊಮ್ಮಿತು.
ಪಿಎಸ್ಐ ಎಂ.ಎಲ್.ಸಿದ್ದೇಶ್ (3 ಚಿನ್ನ, ತಲಾ ಒಂದು ಬೆಳ್ಳಿ, ಕಂಚು), ಎಎಚ್ಸಿ ನಾಗೇಂದ್ರ (1 ಚಿನ್ನ, 1 ಬೆಳ್ಳಿ), ಹೇಮಂತ್ (2 ಬೆಳ್ಳಿ), ಪುರುಷೋತ್ತಮ, ಸಂತೋಷ್ ತಲಾ ಒಂದು ಬೆಳ್ಳಿ ಗೆದ್ದರು. ಉತ್ತಮ ಶ್ವಾನ ಪ್ರಶಸ್ತಿಗೆ ‘ಕೃಷ್ಣ’ ಭಾಜನವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.