ADVERTISEMENT

ಮೈಸೂರು: ಒತ್ತುವರಿ ಆಗಿದ್ದ ₹ 15.4 ಕೋಟಿ ಮೌಲ್ಯದ ಆಸ್ತಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 13:51 IST
Last Updated 8 ಡಿಸೆಂಬರ್ 2020, 13:51 IST
ಒತ್ತುವರಿ ತೆರವು ಕಾರ್ಯಾಚರಣೆ
ಒತ್ತುವರಿ ತೆರವು ಕಾರ್ಯಾಚರಣೆ   

ಮೈಸೂರು: ನಗರದ ವಿವಿಧೆಡೆ ಒತ್ತುವರಿಯಾಗಿದ್ದ ಸುಮಾರು ₹ 15.4 ಕೋಟಿ ಮೌಲ್ಯದ ಜಮೀನನ್ನು ಮಂಗಳವಾರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ತನ್ನ ವಶಕ್ಕೆ ಪಡೆದುಕೊಂಡಿದೆ.

ಟಿ.ಕೆ.ಬಡಾವಣೆಯಲ್ಲಿ (ನಿವೇಶನ ಸಂಖ್ಯೆ 777) ₹ 1.70 ಕೋಟಿ ಮೌಲ್ಯದ 40x60 ಅಡಿ ವಿಸ್ತೀರ್ಣದ ಮೂಲೆ ನಿವೇಶನವನ್ನು ವಶಕ್ಕೆ ಪಡೆಯಲಾಗಿದೆ. ದಟ್ಟಗಳ್ಳಿ ಸರ್ವೆ ಸಂಖ್ಯೆ 114 ಮತ್ತು 115ರಲ್ಲಿ ಪ್ರಾಧಿಕಾರಕ್ಕೆ ಸೇರಿದ ಸುಮಾರು ₹ 12 ಕೋಟಿ ಮೌಲ್ಯದ 50x80 ಅಡಿ ವಿಸ್ತೀರ್ಣದ ಮೂರು ನಿವೇಶನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅಲ್ಲದೇ, ಟಿ.ಕೆ.ಬಡಾವಣೆಯ ಮತ್ತೊಂದು ಕಡೆ (ನಿವೇಶನ ಸಂಖ್ಯೆ 719/ಎ) ಒತ್ತುವರಿ ಆಗಿದ್ದ ₹ 1.70 ಕೋಟಿ ಮೌಲ್ಯದ 40x60 ಅಡಿ ವಿಸ್ತೀರ್ಣದ ನಿವೇಶನವನ್ನು ಪ್ರಾಧಿಕಾರವು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ADVERTISEMENT

‘ಪ್ರಾಧಿಕಾರಕ್ಕೆ ಸೇರಿದ ಜಮೀನನ್ನು ಒತ್ತುವರಿ ಮಾಡಿಕೊಂಡು, ತಂತಿ ಬೇಲಿ ಹಾಕಿ ಶೆಡ್‌ ಆಗಿ ಮಾಡಿಕೊಂಡಿದ್ದರು. ಅವುಗಳನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಕಳೆದ ಆರು ತಿಂಗಳಲ್ಲಿ ಸುಮಾರು ₹ 150 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಒತ್ತುವರಿದಾರರ ಮೇಲೆ ಕ್ರಮ ಜರುಗಿಸಲಾಗುವುದು. ವಶಕ್ಕೆ ಪಡೆದ ನಿವೇಶನಗಳನ್ನು ಹರಾಜಿಗೆ ಹಾಕಲಾಗುವುದು’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತೆರವು ಕಾರ್ಯಾಚರಣೆಯಲ್ಲಿ ಡಿ.ಬಿ.ನಟೇಶ್‌, ಅಧೀಕ್ಷಕ ಎಂಜಿನಿಯರ್‌ ಶಂಕರ್‌, ವಲಯ ಅಧಿಕಾರಿ ಕಿರಣ್‌, ಸಹಾಯಕ ಎಂಜಿನಿಯರ್‌ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.