
ಮೈಸೂರು: ತಾಲ್ಲೂಕಿನ ಉತ್ತನಹಳ್ಳಿ ಗ್ರಾಮದಲ್ಲಿರುವ ಜ್ವಾಲಾಮುಖಿ ತ್ರಿಪುರಸುಂದರಿ ದೇವಿ ದೇವಸ್ಥಾನದಲ್ಲಿ 2025-26ನೇ ಸಾಲಿನ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಸಂಭ್ರಮದ ಚಾಲನೆ ದೊರೆಯಿತು. ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಂಗಳವಾರದವರೆಗೆ ಇಲ್ಲಿ ಉತ್ಸವ ನಡೆಯಲಿದೆ.
ಬೆಳಿಗ್ಗೆ ದೇವಿ ಮೂರ್ತಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ನೆರವೇರಿತು. ಏಕಾದಶವಾರ, ರುದ್ರಾಭಿಷೇಕ, ಸುವರ್ಣಾಲಂಕಾರ ಸಹಸ್ರ ನಾಮಾರ್ಚನೆ ನಿವೇದನೆ, ಮಹಾಮಂಗಳಾರತಿ ರಾಜೋಪಚಾರ, ರಾಷ್ಟ್ರಾಶೀರ್ವಾದ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ, ಪ್ರದೋಷಕಾಲದ ಪೂಜೆ, ತ್ರಿಶತಿ ನಾಮಾರ್ಚನೆ ಮಹಾಮಂಗಳಾರತಿ ಜರುಗಿತು. ರಾತ್ರಿ 8.30ಕ್ಕೆ ಅಮ್ಮನವರ ಕನ್ಯಾಕನ್ನಡಿ ಉತ್ಸವ ಪುಣ್ಯಾಹ ಮಂಟಪೋತ್ಸವ ಜರುಗಿತು.
ಸೋಮವಾರ (ಫೆ.2) ಪ್ರಥಮಾಅಶ್ಲೇಷ ನಕ್ಷತ್ರ ಅಂಗವಾಗಿ ಏಕಾದಶವಾರ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ ವಿಶೇಷ ಪೂಜೆಗಳು, ಕದಲಿ ಅಲಂಕಾರ ನೆರವೇರಲಿದೆ. ಮಂಗಳವಾರ (ಫೆ.3) ದ್ವಿತೀಯಾ ಮಖ ನಕ್ಷತ್ರ ಪ್ರಯುಕ್ತ ಏಕಾದಶವಾರ ರುದ್ರಾಭಿಷೇಕ, ಪಂಚೋಪಚಾರ ಪೂಜೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.