
ನಂಜನಗೂಡು: ‘ಮುಸ್ಲಿಂ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣದ ಅಗತ್ಯವಿದೆ, ಇಂದಿನ ಮಕ್ಕಳೇ ಮುಂದೆ ದೇಶದ ಭವಿಷ್ಯ ರೂಪಿಸುವವರು. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ಗುರುಭವನದಲ್ಲಿ ತಾಲ್ಲೂಕು ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಘ ವಿದ್ಯಾರ್ಥಿಗಳಿಗೆ ಕೌಶಲಭರಿತ ಶಿಕ್ಷಣ, ಮಾರ್ಗದರ್ಶನ ನೀಡುವ ಯೋಜನೆ ರೂಪಿಸುವ ಮೂಲಕ ಸಮುದಾಯದ ಏಳಿಗೆಗೆ ಸಹಕಾರ ನೀಡಬೇಕು. ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸಗಳ ಸಲುವಾಗಿ ಬರುವ ಸಾರ್ವಜನಿಕರೊಂದಿಗೆ ಸೌಹಾರ್ದ ರೀತಿಯಲ್ಲಿ ವರ್ತಿಸಿ, ಅವರ ಕೆಲಸಗಳನ್ನು ಮಾಡಿಕೊಡಬೇಕು. ಬಡವರನ್ನು ವೃಥಾ ಸರ್ಕಾರಿ ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು. ಬಡಜನರ ಸೇವೆ ಮೂಲಕ ದೇವರನ್ನು ಕಾಣಬಹುದಾಗಿದೆ. ಸಂಘಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಿ, ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಸೈಯದ್ ಮುದಸ್ಸಿರ್ ಮಾತನಾಡಿ, ‘ಎಸ್ಎಸ್ಎಲ್ಸಿ, ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಮಾರ್ಗದರ್ಶನ ಹಾಗೂ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಸಂಘದ ಸದಸ್ಯರನ್ನು ಸಂಪರ್ಕಿಸಿ, ಸರ್ಕಾರದ ಸೌಲಭ್ಯಗಳನ್ನು ದೊರೆಕಿಸಿಕೊಡಲು ಮುಂದಾಗುತ್ತೇವೆ. ಉನ್ನತ ಹುದ್ದೆಯಲ್ಲಿರುವ ಸಮುದಾಯದವರು ಬಡ ವಿದ್ಯಾರ್ಥಿಗಳ ನೆರವಿಗೆ ನಿಲ್ಲಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿ, ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಶಕೀಲ್ ಭಾಷಾ, ರಾಜ್ಯ ಉಪಾಧ್ಯಕ್ಷ ಮುನಾವರ್ ಭಾಷಾ, ಅಸೈಯದ್ ಖಾದಿರ್, ಅಪ್ಸರ್ ಪಾಷ, ನಯಾಝ್ ಪಾಷ, ಸೈಯದ್ ನಾಸೀರ್ ಅಹಮ್ಮದ್, ಸೈಯದ್ ಸಾದಿಕ್ ಪಾಷ, ಸೈಯ್ಯದಾ ಸುಲ್ತಾನ, ಬಿಎಒ ಮಹೇಶ್, ಧರ್ಮರತ್ನಾಕರ, ಜರೀನಾ ಖುರ್ಶೀದ್ ತಬಸ್ಸುಮ್ ಫಾತೀಮಾ, ಉಮ್ಮೆ ಅಸ್ಮಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.