ADVERTISEMENT

ಯೋಗಕ್ಕೆ ಹೊಸ ರಾಗ!

ಮೈಸೂರು ಮಂಜುನಾಥ್ ಸಂಗೀತ ಸಂಯೋಜನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 2:59 IST
Last Updated 21 ಜೂನ್ 2019, 2:59 IST
ಮೈಸೂರು ಮಂಜುನಾಥ್
ಮೈಸೂರು ಮಂಜುನಾಥ್   

ಮೈಸೂರು: ಪಿಟೀಲು ವಾದಕ ಮೈಸೂರು ಮಂಜುನಾಥ್ ಅವರು ಯೋಗಕ್ಕೆ ಸಂಬಂಧಿಸಿದಂತೆ ‘ಭರತ’ ಎಂಬ ಹೆಸರಿನ ಹೊಸ ರಾಗವನ್ನು ಸೃಷ್ಟಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಶತಾವಧಾನಿ ಗಣೇಶ್‌ ಅವರು ಗೀತ ರಚನೆ ಮಾಡಿದ್ದು, ಮಂಜುನಾಥ್‌ ಸಂಗೀತ ಸಂಯೋಜನೆ ಮಾಡಿ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗ ಪ್ರಿಯರಿಗೆ ಉಡುಗೊರೆ ನೀಡಿದ್ದಾರೆ.

‘ಸಂಗೀತದ ಮೂಲಕ ಯೋಗಕ್ಕೆ ನಮನ ಸಲ್ಲಿಸುವುದು ನನ್ನ ಉದ್ದೇಶವಾಗಿದೆ. ಹೊಸ ರಾಗದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಮಂಜುನಾಥ್‌ ಹೇಳಿದರು.

ADVERTISEMENT

‘ಸೆಂಟರ್‌ ಫಾರ್‌ ಸಾಫ್ಟ್‌ ಪವರ್‌ ಮತ್ತು ಇಂಡಿಯಾ ಫೌಂಡೇಷನ್‌ ಸಂಸ್ಥೆಗಳು ಯೋಗಕ್ಕೆ ಹೊಸ ರಾಗ ಸೃಷ್ಟಿಸುವಂತೆ ನನ್ನಲ್ಲಿ ಕೇಳಿಕೊಂಡವು. ಈಗ ಇರುವ ರಾಗ ಇರಬಾರದು. ಹೊಸ ರಾಗ ಬೇಕು ಎಂಬ ಸೂಚನೆಯನ್ನೂ ಕೊಟ್ಟಿದ್ದವು. ಅದನ್ನು ಸವಾಲಾಗಿ ಸ್ವೀಕರಿಸಿ ಹೊಸ ರಾಗ ಸೃಷ್ಟಿಸಿದ್ದೇನೆ’ ಎಂದರು.

‘ಭರತ’ ಹೆಸರಿನ ರಾಗ ಸಂಯೋಜನೆಗೆ ಮೂರು ವಾರಗಳನ್ನು ತೆಗೆದುಕೊಂಡಿದ್ದೇನೆ. ಸಂಗೀತ ತಜ್ಞ ಪ್ರವೀಣ್‌ ರಾವ್‌ ಮತ್ತು ವಿಜಯಲಕ್ಷ್ಮಿ ಅವರು ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ’ ಎಂದು ನುಡಿದರು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯುವ ಜೂನ್‌ 21 ರಂದೇ ವಿಶ್ವ ಸಂಗೀತ ದಿನಾಚರಣೆಯೂ ನಡೆಯಲಿದೆ. ಅದೇ ದಿನ ಗೀತೆಯ ಬಿಡುಗಡೆ ನಡೆಯಲಿದೆ.

20 ಸಂಗೀತಗಾರರು: ಐದು ನಿಮಿಷಗಳ ಗೀತೆಯು ಇದಾಗಿದ್ದು, ಭಾರತ ಹಾಗೂ ಯೂರೋಪಿನ ಖ್ಯಾತ ಸಂಗೀತ ವಿದ್ವಾನ್‌ಗಳು ಕೆಲಸ ಮಾಡಿದ್ದಾರೆ. ಕರ್ನಾಟಕ, ಹಿಂದೂಸ್ತಾನಿ, ಜಪಾನಿ, ಯುರೋಪಿಯನ್‌ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಹೆಸರು ಮಾಡಿರುವ ಸಂಗೀತ ತಜ್ಞರು ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.