ಮೈಸೂರು: ‘ಇಂದಿನ ಯುಗದಲ್ಲಿ ಹೆತ್ತವರು ಮತ್ತು ಮಕ್ಕಳ ಸಂಬಂಧ ಹದಗೆಡುತ್ತಿದ್ದು, ವಯಸ್ಸಾದ ತಂದೆ–ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಮೈಸೂರು ವಿ.ವಿಯ ನಿವೃತ್ತ ಪ್ರಾಧ್ಯಾಪಕ ನೀಲಗಿರಿ ತಳವಾರ್ ವಿಷಾದ ವ್ಯಕ್ತಪಡಿಸಿದರು.
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಮತ್ತು ಕನ್ನಡ ಸಾಹಿತ್ಯ ಕಲಾಕೂಟವು ಶುಕ್ರವಾರ ಆಯೋಜಿಸಿದ್ದ ಡಾ.ಮನು ಬಳಿಗಾರ್ ಅವರ ‘ಮೈ ಫಾದರ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ‘ಅಪ್ಪ’ ಪುಸ್ತಕದ ಕುರಿತು ಮಾತನಾಡಿದರು.
‘ಮನು ಬಳಿಗಾರ್ ಅವರು ಅಪ್ಪನ ಕುರಿತ ನೆನಪುಗಳಿಗೆ ಬರಹ ರೂಪ ಕೊಟ್ಟಿದ್ದಾರೆ. ಗುರು ಹಾಗೂ ಗೆಳೆಯನಾಗಿ ಅಪ್ಪ ಆವರಿಸಿಕೊಳ್ಳುವುದನ್ನು ಬರೆದಿದ್ದಾರೆ. ತಂದೆಯ ಜತೆಗಿನ ಸಂಬಂಧ ಹೇಗಿತ್ತು ಎಂಬುದನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ’
ಎಂದರು.
‘ಪರಂಪರೆ ಶ್ರೇಷ್ಠವೋ, ಆಧುನಿಕತೆ ಶ್ರೇಷ್ಠವೋ ಎಂಬ ಬಗ್ಗೆ ಕೆಲವರು ಚರ್ಚೆ ನಡೆಸುವರು. ಇದರಿಂದ ದ್ವೇಷ, ಉದ್ವೇಗ ಹೆಚ್ಚುತ್ತಿದೆ. ಆದರೆ, ಬಳಿಗಾರ್ ಅವರು ಪರಂಪರೆ ಮತ್ತು ಆಧುನಿಕತೆಯಲ್ಲಿ ಇರುವ ಉತ್ತಮ ಗುಣಗಳನ್ನು ಬದುಕಿಗೆ ಅಳವಡಿಸಿಕೊಂಡು ಜೀವನ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ’ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿದರು.‘ಅಪ್ಪ’ ಕೃತಿ ಅನುವಾದಕ ಮತ್ತು ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿ.ವಿ ಕುಲಸಚಿವ ಪ್ರೊ.ಬಸವರಾಜ ಡೋಣೂರ ‘ಮೈ ಫಾದರ್’ ಅನುವಾದಿತ ಕೃತಿ ಕುರಿತು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.