ADVERTISEMENT

ಬಸ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

₹ 13.85 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 5:03 IST
Last Updated 16 ಸೆಪ್ಟೆಂಬರ್ 2020, 5:03 IST
ಆರೋಪಿಯೊಂದಿಗೆ ಕಾರ್ಯಾಚರಣೆ ತಂಡ
ಆರೋಪಿಯೊಂದಿಗೆ ಕಾರ್ಯಾಚರಣೆ ತಂಡ   

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಬ್ಯಾಗ್‌ ಹಾಗೂ ಕಿಸೆಗಳಿಂದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಆರೋಪಿಯೊಬ್ಬನನ್ನು ಲಷ್ಕರ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಡಿಕೇರಿಯ ಮಹಮ್ಮದ್ ಇಮ್ರಾನ್ (37) ಬಂಧಿತ ಆರೋಪಿ. ಈತನಿಂದ ₹ 13.85 ಲಕ್ಷ ಮೌಲ್ಯದ 277 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜನವರಿ 16ರಂದು ರಾಮನಗರದಿಂದ ಮಡಿಕೇರಿಗೆ ಮಹಿಳೆಯೊಬ್ಬರು ಪ್ರಯಾಣಿಸುವಾಗ ಇವರ ಲಗೇಜ್‌ ಬ್ಯಾಗ್‌ ಕಳವಾಗಿತ್ತು. ಇದರಲ್ಲಿ ಚಿನ್ನಾಭರಣಗಳಿದ್ದವು ಎಂದು ಅವರು ದೂರು ನೀಡಿದ್ದರು.

ADVERTISEMENT

ಇದರ ಬೆನ್ನತ್ತಿದ ಪೊಲೀಸರು ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಈ ವೇಳೆ ಈತ ಪ್ರಯಾಣಿಕರ ಬ್ಯಾಗ್‌ಗಳು ಹಾಗೂ ಕಿಸೆಗಳಿಂದ ಹಣ ಮತ್ತು ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕುರಿತು ಒಪ್ಪಿಕೊಂಡ. ಚಿನ್ನಾಭರಣಗಳನ್ನು ನಗರದ ವಿವಿಧ ಆಭರಣದ ಅಂಗಡಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.‌

ಡಿಸಿಪಿಗಳಾದ ಪ್ರಕಾಶ್‌ಗೌಡ ಹಾಗೂ ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಸ್.ಡಿ.ಸುರೇಶ್‌ಕುಮಾರ್, ಪಿಎಸ್‌ಐಗಳಾದ ಗೌತಮ್‌ಗೌಡ, ಧನಲಕ್ಷ್ಮೀ, ಸಿಬ್ಬಂದಿಯಾದ ಕೆ.ಎನ್.ಲೋಕೇಶ್, ಮಹದೇವಸ್ವಾಮಿ, ಬೋಪಯ್ಯ, ಮಂಜುನಾಥ್, ಪ್ರತೀಪ್, ಚಿನ್ನಪ್ಪ, ಕಲ್ಲೋಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.