ಮೈಸೂರು: ಇಲ್ಲಿನ ದೇವರಾಜ ಠಾಣೆ ಕಾನ್ ಸ್ಟೆಬಲ್ ಪರ್ಸಪ್ಪ ಕೊನ್ನೂರು ( 29) ಇಲ್ಲಿನ ಜಲಪುರಿಯ ತಮ್ಮ ವಸತಿಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅವರು 2017ರ ಬ್ಯಾಚಿನಲ್ಲಿ ಕಾನ್ ಸ್ಟೆಬಲ್ ಆಗಿ ಆಯ್ಕೆಗೊಂಡು 2018 ರಿಂದಲೂ ಇಲ್ಲಿನ ದೇವರಾಜ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ಮಕ್ಕಳಿರಲಿಲ್ಲ. ಪತ್ನಿ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾರೆ.
ಸಾವಿನ ಕುರಿತು ತನಿಖೆಯ ಅಗತ್ಯ ಇಲ್ಲ. ತನ್ನ ಪಾಲಿನ ಆಸ್ತಿಯನ್ನೆಲ್ಲ ಅಣ್ಣನ ಮಕ್ಕಳಿಗೆ ನೀಡಬೇಕು ಎಂದು ಪತ್ರ ಬರೆದಿಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಘಟನೆ: ನೀರಿನಲ್ಲಿ ಮುಳುಗಿ ಇಬ್ಬರು ಸಾವು
ಮೈಸೂರು: ಹುಣಸೂರು ನಗರದ ಸಂತಜೋಸೆಫ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಹರ್ಷ (13) ತನ್ನ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಮುತ್ತುರಾಯನಹೊಸಹಳ್ಳಿ ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಗೃಹಿಣಿ ರುದ್ರಮ್ಮ (53) ಕಾಲುಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಎರಡು ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.