ಪ್ರಜ್ವಲ್ ರೇವಣ್ಣ
ಮೈಸೂರು: ‘ಅತ್ಯಾಚಾರ ಸಂತ್ರಸ್ತೆಯ ದಿಟ್ಟ ನಡೆಯೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಆರೋಪ ಸಾಬೀತಾಗಲು ಪ್ರಮುಖ ಕಾರಣ’ ಎಂದು ಪ್ರಕರಣದ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಅತ್ಯಾಚಾರ ಆರೋಪವಾದ ಕಾರಣ ಪ್ರಕರಣವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿತ್ತು. ತಂಡವು ಆರೋಪಿಯನ್ನು ಹುಡುಕುವ ವೇಳೆಗಾಗಲೇ ಆತನೇ ನಮ್ಮ ಬಲೆಗೆ ಬಿದ್ದ. ಅಲ್ಲಿಂದ ಪ್ರಕರಣ ತಿರುವು ಪಡೆದುಕೊಂಡಿತು. ಸತತವಾಗಿ ಏಳು ತಿಂಗಳು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ 180 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆವು’ ಎಂದು ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ತನಿಖೆಯ ವೇಳೆ ಸಂತ್ರಸ್ತೆಯು ಉತ್ತಮವಾಗಿ ಸಹಕರಿಸಿದ್ದಾರೆ. ಆಕೆ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ಕೇಳಲಾಗಿತ್ತು. ಪ್ರಕರಣದ ತನಿಖೆ ಮುಗಿಯುವವರೆಗೂ ಆಕೆ ತೋರಿದ ದಿಟ್ಟತನ ಮಾದರಿ’ ಎಂದರು.
ಪ್ರಕರಣದ ತನಿಖೆಗಾಗಿ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ಪಿಗಳಾಗಿದ್ದ ಸೀಮಾ ಲಾಟ್ಕರ್ ಹಾಗೂ ಸುಮನ್ ಅವರು ಎಸ್ಐಟಿ ತಂಡ ಮುನ್ನಡೆಸಿದ್ದರು. ಅವರೊಂದಿಗೆ 26 ಅಧಿಕಾರಿಗಳೂ ದಾಖಲೆ ಕಲೆಹಾಕುವಲ್ಲಿ ಶ್ರಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.