
ಮೈಸೂರು: ‘ಪ್ರಸಾರಾಂಗ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ಕೆಲವರು ನಕಲು ಪ್ರತಿ ಮಾರುತ್ತಿದ್ದು, ಈ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಎಂ. ನಂಜಯ್ಯ ಹೊಂಗನೂರು ಎಚ್ಚರಿಕೆ ನೀಡಿದರು.
ಇಲ್ಲಿನ ಯುವರಾಜ ಕಾಲೇಜು ಸಂವಿಧಾನ ವಿಭಾಗ, ‘ರೂಸಾ’ ಹಾಗೂ ಪ್ರಸಾರಾಂಗದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿವಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಕಾಲದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸಿ, ಪೂರೈಸುತ್ತಿದೆ. ಆದರೂ ಲ್ಯಾನ್ಸ್ಡೌನ್ ಬಿಲ್ಡಿಂಗ್ ಬಳಿ ಕೆಲವರು ನಕಲು ಪ್ರತಿ ಮಾಡಿ ಮಾರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಕುಲಪತಿ ಹಾಗೂ ಕುಲಸಚಿವರ ಗಮನಕ್ಕೆ ತಂದು ಕಾನೂನು ನೋಟಿಸ್ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.
‘ಪ್ರಸಾರಾಂಗವು ಆರ್ಥಿಕ ಸಂಕಷ್ಟದ ನಡುವೆಯೂ ಸಕಾಲಕ್ಕೆ ಪಠ್ಯಪುಸ್ತಕಗಳನ್ನು ಮುದ್ರಿಸುತ್ತಿದೆ. ಹೀಗಿರುವಾಗ ಖಾಸಗಿಯವರು ನಷ್ಟ ಉಂಟು ಮಾಡುವುದು ಸರಿಯಲ್ಲ. ದೆಹಲಿಯ ಜಾಲತಾಣವೊಂದು ನಮ್ಮ ಪ್ರಕಟಣೆಗಳ ನಕಲು ಮಾಡಿ ಮಾರುತ್ತಿದ್ದು, ಆ ವಿರುದ್ಧವೂ ಕಾನೂನು ಸಮರ ನಡೆಸಲಾಗುವುದು’ ಎಂದರು.
₹ 15 ಲಕ್ಷ ದೊರೆತಿದೆ:
‘ಪ್ರಸಾರಾಂಗವು ಕಳೆದ ತಿಂಗಳು ಹಮ್ಮಿಕೊಂಡಿದ್ದ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟದಿಂದಾಗಿ ₹ 30 ಲಕ್ಷ ಮುಖಬೆಲೆಯ ಪುಸ್ತಕಗಳು ಮಾರಾಟವಾಗಿದೆ. ಐದು ಸಾವಿರ ಮಂದಿ ಭೇಟಿ ನೀಡಿದ್ದರು. ಇದರಿಂದ ನಮಗೆ ಶೇ.50ರಷ್ಟು ಅಂದರೆ ₹ 15 ಲಕ್ಷ ಬಂದಿದೆ. ಈ ತಿಂಗಳಾಂತ್ಯದವರೆಗೂ ರಿಯಾಯಿತಿ ಇರಲಿದೆ‘ ಎಂದು ತಿಳಿಸಿದರು.
‘ಪ್ರಸಾರಾಂಗದಲ್ಲಿ 800 ಶೀರ್ಷಿಕೆಗಳ ಕೃತಿಗಳು ಲಭ್ಯ ಇವೆ. ಈವರೆಗೆ 800 ಪ್ರಚಾರೋಪನ್ಯಾಸ ನಡೆದಿದ್ದು, 400 ಸಣ್ಣ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಮೊದಲು 25 ಪೈಸೆ ಇದ್ದಿದ್ದು ಈಗ ₹ 20 ಆಗಿದೆ. ಈ ಬಾರಿ ಸರಣಿಯಲ್ಲಿ 15 ಪುಟ್ಟ ಕೃತಿಗಳನ್ನು ಪ್ರಕಟಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ‘ಎಲ್ಲ ಕಾರ್ಯಕ್ರಮಗಳಲ್ಲೂ ಸಂವಿಧಾನ ಪೀಠಿಕೆ ಬೋಧಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದೇವೆ’ ಎಂದು ತಿಳಿಸಿದರು.
ಸಂವಿಧಾನದ ಆಶಯಗಳು ಕುರಿತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉಪನ್ಯಾಸ ನೀಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ ಮಾತನಾಡಿದರು. ಸಂವಿಧಾನ ವಿಭಾಗದ ಸಂಯೋಜಕ ರವಿಚಂದ್ರ ಸಂವಿಧಾನ ಪೀಠಿಕೆ ಬೋಧಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ವಿಜಯಕುಮಾರ್ ಬೊರಟ್ಟಿ, ಪ್ರೊ.ಶೇಖರ್ ನಾಯ್ಕ್, ಪ್ರೊ.ಅನ್ನಪೂರ್ಣ, ಪ್ರೊ.ರೂಬಿ ಸೆಲೆಸ್ಟೀನಾ, ಪ್ರೊ.ಸದಾಶಿವಯ್ಯ, ಎನ್ಎಸ್ಎಸ್ ಅಧಿಕಾರಿ ಗಿರೀಶ್ ಚಂದ್ರ, ಪ್ರಸಾರಾಂಗ ಅಧೀಕ್ಷಕ ಎಂ.ಡಿ. ಚನ್ನಬಸಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.