ADVERTISEMENT

'ಚಾಮುಂಡಿಯ ಕೃಪೆಯಿಂದ ಇಲ್ಲಿಗೆ‌ ಬಂದಿದ್ದೇನೆ': ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 16:31 IST
Last Updated 20 ಜೂನ್ 2022, 16:31 IST
   

ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನಿರ್ಮಿಸಿರುವ ಕ್ಯಾತನಹಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ (ಕೆಎಸ್ಎಸ್) ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರುಉದ್ಘಾಟಿಸಿದರು. ನಂತರಕನ್ನಡದಲ್ಲಿ ಮಾತು ಆರಂಭಿಸಿದರು.

ಸುತ್ತೂರು ಮಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಚಾಮುಂಡಿಯ ಕೃಪೆಯಿಂದಾಗಿ‌ ಇಲ್ಲಿಗೆ‌ ಬಂದಿದ್ದೇನೆ. ಸಂತರ ಆಶೀರ್ವಾದ ಪಡೆದು ಧನ್ಯತೆಯನ್ನು ಅನುಭವಿಸಿದ್ದೇನೆ. ರಾಜ್ಯದಲ್ಲಿರುವ ಮಠಗಳ ಪರಂಪರೆಗೆ‌ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು. ವಿವಿಧ ಮಠಗಳ ಹೆಸರನ್ನೂ ಅವರು ಉಲ್ಲೇಖಿಸಿದರು.

‘ಸಮಾಜ ವಿಜ್ಞಾನದ ಉತ್ಕೃಷ್ಟ ಸಂಪುಟ ನಮ್ಮ‌ ಬಳಿ ಇದೆ. ನಾರದ ಸೂತ್ರದ ಮೂಲಕ ಮಾನವೀಯ ಮೌಲ್ಯಗಳನ್ನು ಅದರಲ್ಲಿ ಕಾಣಬಹುದು’ ಎಂದರು.

ADVERTISEMENT

‘ಜ್ಞಾನಕ್ಕಿಂತ ಸಮಾನವಾದುದು ಯಾವುದೂ ಇಲ್ಲ. ಈ ನಿಟ್ಟಿನಲ್ಲಿ ಯುಗಗಳೇ ಬದಲಾದರೂ ಭಾರತದ ಚೇತನ ಕಡಿಮೆ ಆಗುವುದಿಲ್ಲ.‌ ಸಂತ, ಋಷಿ, ಮುನಿ, ಆಚಾರ್ಯ, ಭಗವಂತನ ಮೂಲಕ ದೇಶವು ಪುನರ್ಜೀವಿಸುತ್ತಿರುತ್ತದೆ. ಮಂದಿರ ಹಾಗೂ ಮಠಗಳ ಮೂಲಕ ದೇಶದ ಜ್ಞಾನ ಪ್ರಜ್ವಲಿಸುತ್ತಿರುತ್ತದೆ. ಹಲವು ಮಠಗಳನ್ನು ಹೊಂದಿರುವ ಕರ್ನಾಟಕವು ವಿದ್ಯಾದಾನವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ’ ಎಂದು ಹೇಳಿದರು.

‘ಸತ್ಯದ ಅಸ್ತಿತ್ವವು ಸಂಶೋಧನೆಯಿಂದ ಅಗುವುದಿಲ್ಲ; ಸೇವೆಯಿಂದ ಆಗುತ್ತದೆ. ಈ ನಿಟ್ಟಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಆಧ್ಯಾತ್ಮಿಕ, ಧಾರ್ಮಿಕ ಅಲ್ಲದೆ‌ ಶಿಕ್ಷಣ ಕ್ಷೇತ್ರದಲ್ಲೂ ದೊಡ್ಡ ಯೋಗದಾನ ನೀಡುತ್ತಿದೆ. ಭಗವಾನ್ ಬಸವೇಶ್ವರರ ಪ್ರೇರಣೆಯಂತೆ ನಾಡಿನ ಮಠಗಳು‌ ತ್ರಿವಿಧ ದಾಸೋಹ ಮಾಡುತ್ತಿವೆ’ ಎಂದು ಶ್ಲಾಘಿಸಿದರು.

ಮೈಸೂರಿನಿಂದ ಪ್ರಕಟವಾಗುವ ದೇಶದ ಏಕೈಕ ಸಂಸ್ಕೃತ ಪತ್ರಿಕೆ ‘ಸುಧರ್ಮ’ ಬಗ್ಗೆಯೂ ಪ್ರಧಾನಿ ಉಲ್ಲೇಖಿಸಿದರು.

ತಾಯಿ ಜೊತೆಗಿನ ಕಲಾಕೃತಿ ಉಡುಗೊರೆ
ಸುತ್ತೂರು ಶ್ರೀಗಳು ಮೋದಿ ಅವರಿಗೆ ರುದ್ರಾಕ್ಷಿ ಮಾಲೆ, ದೊಡ್ಡದಾದ ಹೂವಿನ ಹಾರ ಹಾಗೂ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಬಸವಣ್ಣನವರ ಫೋಟೊ ಕೂಡ ನೀಡಿದರು. ಆ ಫೋಟೊಗೆ ಮೋದಿ ನಮಸ್ಕಾರ ಮಾಡಿದ್ದು ವಿಶೇಷವಾಗಿತ್ತು.ಮೋದಿ ತಮ್ಮ ತಾಯಿಯೊಂದಿಗೆ ಕುಳಿತಿರುವ ಚಿತ್ರದ ದೊಡ್ಡ ಕಲಾಕೃತಿಯನ್ನು ಶ್ರೀಗಳು ಸ್ಮರಣಿಕೆಯಾಗಿ ನೀಡಿದ್ದು ಗಮನಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.