ADVERTISEMENT

ಆರೋಪ ಸಾಬೀತುಪಡಿಸಿ; ಸವಾಲು

ಸಂಸದ ಪ್ರತಾಪಸಿಂಹಗೆ ತಿರುಗೇಟು ನೀಡಿದ ಮಹಾನಗರ ಪಾಲಿಕೆ ಸದಸ್ಯರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:45 IST
Last Updated 6 ಜುಲೈ 2020, 16:45 IST

ಮೈಸೂರು: ‘ಪಾಲಿಕೆಯ ಸದಸ್ಯರ ವಿರುದ್ಧ ಸಂಸದ ಪ್ರತಾಪ ಸಿಂಹ ಮಾಡಿರುವ ಆರೋಪ ಸತ್ಯಕ್ಕೆ ದೂರವಾದವು’ ಎಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಆಕ್ರೋಶ ವ್ಯಕ್ತಪಡಿಸಿದರು.

‘ಕಟ್ಟಡ ನಿರ್ಮಿಸುತ್ತಿರುವವರಿಗೆ ಪಾಲಿಕೆಯ ಯಾವ ಸದಸ್ಯರು ಕಿರುಕುಳ ನೀಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಬಹಿರಂಗ ಪಡಿಸಿ’ ಎಂದು ಸೋಮವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸಂಸದರ ಆರೋಪ ನೋವುಂಟು ಮಾಡಿದೆ. ಕೌನ್ಸಿಲ್ ಸಭೆಯಲ್ಲಿ ಸದಸ್ಯರನ್ನು ಪ್ರಶ್ನಿಸಲು ಅವಕಾಶವಿದೆ. ಆದರೂ ಪ್ರತಾಪ ಸಿಂಹ ವಿನಾಃ ಕಾರಣ ಆರೋಪ ಮಾಡಿರುವುದು ಸರಿಯಲ್ಲ’ ಎಂದರು.

ADVERTISEMENT

ಪಾಲಿಕೆಯ ಕಾಮಗಾರಿ ಸಮಿತಿ ಅಧ್ಯಕ್ಷ ಸಯ್ಯದ್‌ ಹಶ್ರತುಲ್ಲಾ ಖಾನ್ ಮಾತನಾಡಿ, ‘ನಮ್ಮ ಸಮಿತಿಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಇದ್ದಾರೆ. ಸಂಸದರು ನಮ್ಮ ಮೇಲಿನ ಆರೋಪ ಸಾಬೀತುಪಡಿಸಿದರೆ ರಾಜೀನಾಮೆಗೂ ಸಿದ್ಧ’ ಎಂದು ಸವಾಲು ಹಾಕಿದರು.

‘ಇದೂವರೆಗೂ ಸಮಿತಿ ಸ್ಥಳ ಪರಿಶೀಲನೆ ನಡೆಸಿರೋದು ಮೂರು ಕಡೆ ಮಾತ್ರ. ಇನ್ನೂ ಭೂಮಿಯೊಳಗೆ ವಿದ್ಯುತ್ ಕೇಬಲ್‌ ಅಳವಡಿಕೆ ಸರಿಯಾಗಿ ನಡೆಯದಿದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ ಹೊರತು ಯಾರೊಬ್ಬರ ಬಳಿ ಹಣಕ್ಕೆ ಬೇಡಿಕೆಯಿಟ್ಟಿಲ್ಲ. ಸಂಸದರು ತಾವೇ ಮಾಡಿದ ಆರೋಪ ಸಾಬೀತು ಪಡಿಸಲಿ’ ಎಂದು ಗುಡುಗಿದರು.

‘ಮೇಯರ್–ಉಪ ಮೇಯರ್ ಚುನಾವಣೆ ಸಂದರ್ಭ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತ್ರ ಪಾಲಿಕೆಗೆ ಬರುವ ಸಂಸದ ಪ್ರತಾಪ ಸಿಂಹ, ಕೌನ್ಸಿಲ್ ಸಭೆಗೆ ಹಾಜರಾಗಿ ವಿಷಯ ಪ್ರಸ್ತಾಪಿಸಲಿ. ಕೇಂದ್ರ–ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ. ಈಗಲಾದರೂ ಅಭಿವೃದ್ಧಿಗೆ ಮುಂದಾಗಲಿ. ಚುನಾಯಿತ ಜನಪ್ರತಿನಿಧಿಗಳಿಗೆ ಬಾಯಿಗೆ ಬಂದಂತೆ ಮಾತನಾಡಿ ಅಪಮಾನ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.