ADVERTISEMENT

ಕ್ವಾರಂಟೈನ್‌ನಲ್ಲಿದ್ದರೂ ಚಾಮುಂಡಿ ಬೆಟ್ಟಕ್ಕೆ ಬಂದ ವ್ಯಕ್ತಿ!

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 4:54 IST
Last Updated 4 ಜುಲೈ 2020, 4:54 IST
ಮೈಸೂರಿನ ಚಾಮುಂಡಿ ದೇಗುಲ
ಮೈಸೂರಿನ ಚಾಮುಂಡಿ ದೇಗುಲ    

ಮೈಸೂರು: ಕ್ವಾರಂಟೈನ್‌ ಮಾಡಿದ್ದರೂ ಚಾಮುಂಡಿಬೆಟ್ಟಕ್ಕೆ ಬಂದ ವ್ಯಕ್ತಿಯೊಬ್ಬರು ದೇವರ ದರ್ಶನ ಪಡೆದಿದ್ದು, ಪೊಲೀಸರು ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ತಿರುಪತಿಯ ತೈಲ ನಿಗಮವೊಂದರ ವ್ಯವಸ್ಥಾಪಕರಾದ 52 ವರ್ಷದ ಅವರು ವ್ಯವಹಾರದ ಉದ್ದೇಶಕ್ಕಾಗಿ 2 ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಅವರ ಸಂಪರ್ಕಕ್ಕೆ ಬಂದವರೊಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಹಾಗಾಗಿ, ಅವರನ್ನು ಬನ್ನಿಮಂಟಪದ ಖಾಸಗಿ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಗುರುವಾರ ಸಂಜೆ ಅವರು ಚಾಮುಂಡಿಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು, ಮಂಗಳಾರತಿ ತೆಗೆದುಕೊಳ್ಳುವಾಗ ಮುಂಗೈನಲ್ಲಿದ್ದ ಕ್ವಾರಂಟೈನ್‌ ಸೀಲ್‌ ಅನ್ನು ಅರ್ಚಕರು ಗಮನಿಸಿ, ಸಮೀಪದಲ್ಲೇ ಇದ್ದ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಅವರು ‘ನನಗೆ ನೆಗೆಟಿವ್ ಬಂದಿದೆ. ನಾನು ಕ್ವಾರಂಟೈನ್‌ನಲ್ಲಿ ಇರುವ ಅಗತ್ಯ ಇಲ್ಲ’ ಎಂದು ಉದ್ದಟತನದ ಉತ್ತರ ಕೊಟ್ಟಿದ್ದಾರೆ. ಹೀಗಾಗಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 269 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.