ADVERTISEMENT

ಮೈಸೂರು ರಂಗಾಯಣ: ರಂಗಸಂಚಾರ ಆರಂಭ

ರಂಗಾಯಣ: ಈ ಬಾರಿ ಮೂರು ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 18:19 IST
Last Updated 17 ನವೆಂಬರ್ 2019, 18:19 IST
ರಂಗನಿರ್ದೇಶಕ ಶ್ರೀಪಾದ ಭಟ್‌ ಅವರು ಕಲಾವಿದೆಯ ಮುಖಕ್ಕೆ ಬಣ್ಣ ಹಚ್ಚಿ ರಂಗ ಸಂಚಾರಕ್ಕೆ ಚಾಲನೆ ನೀಡಿದರು. ತಂಡದ ಸದಸ್ಯರು ಇದ್ದಾರೆ
ರಂಗನಿರ್ದೇಶಕ ಶ್ರೀಪಾದ ಭಟ್‌ ಅವರು ಕಲಾವಿದೆಯ ಮುಖಕ್ಕೆ ಬಣ್ಣ ಹಚ್ಚಿ ರಂಗ ಸಂಚಾರಕ್ಕೆ ಚಾಲನೆ ನೀಡಿದರು. ತಂಡದ ಸದಸ್ಯರು ಇದ್ದಾರೆ   

ಮೈಸೂರು: ನಾಡಿನಾದ್ಯಂತ ನಾಟಕ ಪ್ರದರ್ಶಿಸುವ ಉದ್ದೇಶದಿಂದ ರಂಗಾಯಣ ವತಿಯಿಂದ ಸಂಚಾರಿ ರಂಗಘಟಕದ ಪ್ರವಾಸಕ್ಕೆ ಭಾನುವಾರ ಚಾಲನೆ ಲಭಿಸಿತು.

ಹಿರಿಯ ರಂಗನಿರ್ದೇಶಕ ಶ್ರೀಪಾದ ಭಟ್‌ ಚಾಲನೆ ನೀಡಿದರು. ಸಂಚಾರಿ ರಂಗ ತಂಡ ಮೈಸೂರಿನಿಂದ ಬಳ್ಳಾರಿಗೆ ಪ್ರಯಾಣ ಬೆಳೆಸಿತು. ನ. 18ರಂದು ಬಳ್ಳಾರಿಯಲ್ಲಿ ಮೊದಲ ನಾಟಕ ಪ್ರದರ್ಶಿಸಲಿದೆ.

ಈ ಬಾರಿ ಕೇರಳದ ಚಂದ್ರಹಾಸನ್‌ ನಿರ್ದೇಶನದ ‘ಆರ್ಕೇಡಿಯಾದಲ್ಲಿ ಪಕ್’, ಚಿದಂಬರರಾವ್‌ ಜಂಬೆ ನಿರ್ದೇಶನದ ‘ಬೆಂದಕಾಳು ಆನ್‌ ಟೋಸ್ಟ್’ ಮತ್ತು ಶ್ರವಣ್‌ಕುಮಾರ್‌ ಅವರ ‘ರೆಕ್ಸ್‌ ಅವರ್ಸ್– ಡೈನೊ ಏಕಾಂಗಿ ಪಯಣ’ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ.

ADVERTISEMENT

15 ಕಲಾವಿದರು ಮತ್ತು ಮೂವರು ತಾಂತ್ರಿಕ ಸಿಬ್ಬಂದಿಯನ್ನು ಒಳಗೊಂಡಿರುವ ಸಂಚಾರಿ ರಂಗ ತಂಡ ಬಳ್ಳಾರಿ, ರಾಯಚೂರು, ಬೀದರ್‌, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. 45 ದಿನಗಳ ಪ್ರವಾಸದಲ್ಲಿ ಒಟ್ಟು 11 ಕಡೆ ತಲಾ ಮೂರು ನಾಟಕಗಳನ್ನು ಪ್ರದರ್ಶಿಸಲಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.

ಪ್ರತಿ ವರ್ಷ ಎರಡು ಹಂತಗಳಲ್ಲಿ ರಂಗಸಂಚಾರ ಏರ್ಪಡಿಸಲಾಗುತ್ತದೆ. ಎರಡನೇ ಹಂತದಲ್ಲಿ ರಂಗ ತಂಡ ಫೆಬ್ರುವರಿ ಕೊನೆಯಲ್ಲಿ ಪ್ರವಾಸ ಹೊರಟು, ಏಪ್ರಿಲ್‌ನಲ್ಲಿ ವಾಪಸಾಗಲಿದೆ. ಆಯಾ ಕಡೆ ಸ್ಥಳೀಯ ರಂಗ ತಂಡಗಳ ಸಹಯೋಗದಲ್ಲಿ ನಾಟಕ ಪ್ರದರ್ಶನ ಏರ್ಪಡಿಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಒಂದು ನಾಟಕ ಪ್ರದರ್ಶನಕ್ಕೆ ₹ 5 ಸಾವಿರ ಪಡೆದುಕೊಳ್ಳುತ್ತೇವೆ. ಟಿಕೆಟ್‌ ದರವನ್ನು ಆಯಾ ಕಡೆಗಳಲ್ಲಿ ಆಯೋಜಕರು ನಿರ್ಧರಿಸುವರು. ಹಗಲು ಹೊತ್ತು ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ನೀಡಲಿದೆ. ಅದರಿಂದ ರಂಗಾಯಣಕ್ಕೆ ಬರುವ ಸಂಭಾವನೆಯಲ್ಲಿ ಶೇ 50 ರಷ್ಟನ್ನು ಕಲಾವಿದರಿಗೆ ನೀಡುತ್ತೇವೆ’ ಎಂದು ಹೇಳಿದರು.

ಸಂಚಾರಿ ರಂಗಘಟಕದ ಮುಖ್ಯಸ್ಥ ಪ್ರಕಾಶ್‌ ಗರುಡ, ಪ್ರವಾಸ ವ್ಯವಸ್ಥಾಪಕ ಅರಸೀಕೆರೆ ಯೋಗಾನಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.