ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ‘ಟಿಪ್ಪು ನಿಜಕನಸುಗಳು’ ನಾಟಕ ಕೃತಿಯ ಬಿಡುಗಡೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಭಾನುವಾರ ನಡೆಯಿತು.
ಕೃತಿಯ ಬಗ್ಗೆ ಟಿಪ್ಪು ಅಭಿಮಾನಿ ಸಂಘಟನೆಗಳ ಆಕ್ಷೇಪದ ಹಿನ್ನೆಲೆಯಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ರಂಗಾಯಣದ ‘ವನರಂಗ’ದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಾಯಿತು.
ಕೃತಿ ಬಿಡುಗಡೆ ಮಾಡಿದ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪಮಾತನಾಡಿ, ‘ಟಿಪ್ಪು ಕನ್ನಡ ದ್ರೋಹಿ ಎಂಬುದನ್ನು ಇತಿಹಾಸದ ದಾಖಲೆಗಳನ್ನು ಗಮನಿಸಿ ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕೆ, ಕಂದಾಯ ಇಲಾಖೆಯಲ್ಲಿ ಇನ್ನೂ ಉಳಿದಿರುವ ಪರ್ಷಿಯನ್, ಪಾರ್ಸಿ ಹೆಸರುಗಳು, ಬದಲಾದ ಹಾಗೂ ಬದಲಾವಣೆಗೆ ಪ್ರಯತ್ನಿಸಿದ ಊರುಗಳ ಹೆಸರು ಸಾಕ್ಷಿ ಎಂದರು.
‘ಟಿಪ್ಪು ಜಯಂತಿ ಎಂಬುದು ಪ್ರತಿಸ್ಪರ್ಧಿ ಕೀಟಲೆ ಮನೋಭಾವ’ ಎಂದು ವಿಶ್ಲೇಷಿಸಿದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಟಿಪ್ಪು ಮೈಸೂರು ಹುಲಿ ಅಲ್ಲ; ಹುಲಿಯನ್ನು ಏಕಾಂಗಿಯಾಗಿ ಕೊಂದಿಲ್ಲ. ತಂದೆ ಹೈದರಾಲಿಯಂತೆ ಟಿಪ್ಪು ನೇರ ಯುದ್ಧ ಮಾಡಿಲ್ಲ. ಯುದ್ಧರಂಗದಲ್ಲಿ ಸೈನ್ಯವನ್ನೂ ಮುನ್ನಡೆಸಿಲ್ಲ. ಯುದ್ಧಕ್ಕೆ ಹೆದರಿ ಮಕ್ಕಳನ್ನೇ ಬ್ರಿಟಿಷರ ಒತ್ತೆಯಲ್ಲಿರಿಸಿ ಯುದ್ಧವೆಚ್ಚ ಪಾವತಿಸಿದ್ದ. ಕೊನೆಗೆ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಕೋಟೆಯೊಳಗೆ ಸತ್ತು ಬಿದ್ದಿದ್ದ’ ಎಂದು ಆರೋಪಿಸಿದರು.
‘ಟಿಪ್ಪು ಬಗ್ಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾವಾವೇಶ ಅರ್ಥವಾಗುತ್ತದೆ. ಆದರೆ, ಎಚ್.ವಿಶ್ವನಾಥ ಅವರಿಗೆ ಅನಿವಾರ್ಯತೆ ಏನಿದೆ’ ಎಂದು ಪ್ರಶ್ನಿಸಿದರು.
‘ಮೈಸೂರು ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿನ ರೈಲು ನಿಲ್ದಾಣಕ್ಕೂ ಒಡೆಯರ್ ಹೆಸರು ನಾಮಕರಣ ಚಿಂತನೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.