ADVERTISEMENT

ಬಲಾಢ್ಯ ಜಾತಿಗಳಿಗೆ ಒಬಿಸಿ ಬಿಟ್ಟು ಇಡಬ್ಲ್ಯುಎಸ್‌ನಲ್ಲಿ ಕೋಟಾ: ರವಿವರ್ಮಕುಮಾರ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 13:34 IST
Last Updated 25 ಡಿಸೆಂಬರ್ 2022, 13:34 IST
ರವಿವರ್ಮಕುಮಾರ್
ರವಿವರ್ಮಕುಮಾರ್   

ಮೈಸೂರು: ‘ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ (ಡಿ.26) ನಡೆಯಲಿದ್ದು, ಕೆಲವು ಬಲಾಢ್ಯ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಬಿಡುಗಡೆ ಮಾಡಿ ಅವುಗಳನ್ನು ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗಗಳು) ಕೋಟಾದಲ್ಲಿ ಸೇರಿಸಲು ಸರ್ಕಾರ ಯೋಜಿಸಿರುವ ಸುದ್ದಿ ಬಲವಾಗಿ ಹಬ್ಬಿದೆ’ ಎಂದು ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್‌ ತಿಳಿಸಿದರು.

ಅಭಿರುಚಿ ಪ್ರಕಾಶನ ಪ್ರಕಟಿಸಿರುವ, ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ವಿರಚಿತ ‘ಮೀಸಲಾತಿಯ ಒಳನೋಟ’ ಪುಸ್ತಕವನ್ನು ಇಲ್ಲಿ ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಬ್ರಾಹ್ಮಣರಿಗೆ ನೀಡಿರುವ ಇಡಬ್ಲ್ಯುಎಸ್ ಮೀಸಲಾತಿ (ಶೇ 10ರಷ್ಟು)ಯಲ್ಲಿ ರಹಸ್ಯ ಕಾರ್ಯಸೂಚಿ ಅಡಗಿದೆ’ ಎಂದು ಆರೋಪಿಸಿದರು.

ADVERTISEMENT

‘ಸಂವಿಧಾನ‌ವನ್ನು ಬುಡಮೇಲು ಮಾಡುವಂತಹ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಇಡಬ್ಲ್ಯುಎಸ್ ಮೀಸಲಾತಿ ಮುಂದುವರಿಯಲು ಅವಕಾಶ ನೀಡಿದರೆ ಭಾರತವು ಸಾಮಾಜಿಕ ನ್ಯಾಯಕ್ಕೆ ವಿಶ್ವಗುರು ಎನ್ನುವುದನ್ನು ಕಳೆದುಕೊಳ್ಳುತ್ತೇವೆ. ಮೀಸಲಾತಿ ‌ಮೂಲಕ ಆಯ್ಕೆಯಾದವರೂ (ಫಲಾನುಭವಿಗಳು) ಇಡಬ್ಲ್ಯುಎಸ್‌ನಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ಹೊರಗಿಡಿ ಎಂದು ಮತ ಹಾಕಿದ್ದಾರೆ. ಇದಕ್ಕಿಂತ ವಿಪರ್ಯಾಸ ಇದೆಯೇ? ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಹೇಗೆ ಮತ ಹಾಕಿದರು?’ ಎಂದು ಕೇಳಿದರು. ‘ಹಿಂದುಳಿದ ವರ್ಗಗಳ ನಾಯಕರನ್ನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.

‘ಹಿಂದೆ, ಮೀಸಲಾತಿ ವಿರೋಧಿಸಿದ್ದವರೇ ಈಗ ಮೀಸಲಾತಿ ಕೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.