ಸಾಲಿಗ್ರಾಮ: ಅತ್ತೆ, ಮಾವ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ರೊಚ್ಚಿಗೆದ್ದ ಸೊಸೆ ನಡುಬೀದಿಯಲ್ಲೇ ಮಾವನ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಅಮಾನವೀಯ ಘಟನೆ ಸಾಲಿಗ್ರಾಮ ತಾಲ್ಲೂಕಿನ ಕೆಡಗ ಗ್ರಾಮದಲ್ಲಿ ನಡೆದಿದೆ. ನಾಗರಾಜು (73) ಸೊಸೆಯಿಂದ ಕೊಲೆಯಾದವರು.
ಕೊಲೆಯಾಗಿರುವ ನಾಗರಾಜುಗೆ ಇಬ್ಬರು ಪುತ್ರರಿದ್ದು ಹಿರಿಯ ಪುತ್ರ ಪಂಚಾಕ್ಷರಿ ಹಾಗೂ ಈತನ ಪತ್ನಿ ಡಿಲಾಕ್ಷಿ ಆಸ್ತಿಯಲ್ಲಿ ಪಾಲು ಬೇಕು ಎಂದು ಪದೇ ಪದೇ ಹಿಂಸೆ ನೀಡುತ್ತಿದ್ದರು. ಈಚೆಗೆ ಪಂಚಾಕ್ಷರಿ ಮತ್ತು ಈತನ ಪತ್ನಿ ಡಲಾಕ್ಷಿ ಕೆಡಗ ಗ್ರಾಮದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ಡಲಾಕ್ಷಿ ಮಾವ ಮತ್ತು ಅತ್ತೆಗೆ ಗಲಾಟೆ ನಡೆಯುತ್ತಿತ್ತು.
ಕಳೆದ ಎರಡು ದಿನಗಳ ಹಿಂದೆ ನಾಗರಾಜು ಎಂದಿನಂತೆ ಜಮೀನಿಗೆ ಹೋಗುವ ವೇಳೆ ಸೊಸೆ ಡಿಲಾಕ್ಷಿ ಎದುರಾಗಿ ಜಗಳ ಶುರು ಮಾಡಿದ್ದಾಳೆ. ಮಾತಿಗೆ ಮಾತು ಬೆಳೆದು ಸೊಸೆ ಬೀದಿಯಲ್ಲಿ ಇದ್ದ ಕಲ್ಲು ಮತ್ತು ದೊಣ್ಣೆಯಿಂದ ಮಾವ ನಾಗರಾಜುವಿನ ಮೇಲೆ ಹಲ್ಲೆ ಮಾಡಿದ ಪರಿಣಾಮ ಮಾವ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆ ಜಾಗ ಖಾಲಿ ಮಾಡಿರುತ್ತಾಳೆ.
ಜಮೀನಿಗೆ ಹೋಗುತ್ತಿದ್ದ ರೈತರು ನಾಗರಾಜು ಪತ್ನಿ ಗೌರಮ್ಮಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮಸ್ಥರ ಸಹಾಯದಿಂದ ಹಲ್ಲೆಗೆ ಒಳಗಾಗಿದ್ದ ನಾಗರಾಜುವನ್ನು ಮನೆಗೆ ಕರೆದು ತಂದು ಘಟನೆಗೆ ಕಾರಣ ತಿಳಿದು ಗ್ರಾಮಸ್ಥರಿಗೆ ತಿಳಿಸಿ ಬರುವಷ್ಟರಲ್ಲಿ ನಾಗರಾಜು ಮೃತ ಪಟ್ಟಿದ್ದರು. ಇದು ಸಹಜ ಸಾವು ಅಲ್ಲ ಬದಲಿಗೆ ಸೊಸೆ ಡಿಲಾಕ್ಷಿ ಮತ್ತು ಮಗ ಪಂಚಾಕ್ಷರಿ ಕೊಲೆ ಮಾಡಿದ್ದಾರೆ ಎಂದು ಗೌರಮ್ಮ ಸಾಲಿಗ್ರಾಮ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಞುವರ್ಧನ್ ಸ್ಥಳಕ್ಕೆ ಭೇಟಿ ನೀಡಿದ್ದರು. ಸಾಲಿಗ್ರಾಮ ಠಾಣೆ ಸಿಪಿಐ ಶಶಿಕುಮಾರ್ ಪ್ರಕರಣ ದಾಖಲು ಮಾಡಿ ಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಧೀಶರು ಆರೋಪಿ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.