ಮೈಸೂರು: ‘ಆಂಧ್ರಪ್ರದೇಶ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಕ್ಕೆ ರೋಹಿಣಿ ಸಿಂಧೂರಿ ಅವರಿಗೆ ಮೈಸೂರು ಜಿಲ್ಲಾಧಿಕಾರಿಹುದ್ದೆಯ ಉಡುಗೊರೆ ಲಭಿಸಿದೆ’ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.
‘ಮುಜರಾಯಿ ಇಲಾಖೆ ಆಯುಕ್ತರಾ ಗಿದ್ದ ರೋಹಿಣಿ ಅವರು ಆಂಧ್ರಪ್ರದೇಶದ ತಿರುಪತಿಯ ತಿರುಮಲದಲ್ಲಿ ಕರ್ನಾಟಕ ರಾಜ್ಯಛತ್ರಕ್ಕೆ ಸೇರಿದ 7 ಎಕರೆ ಜಾಗದಲ್ಲಿ ₹ 200 ಕೋಟಿ(ತೆರಿಗೆ ಹೊರತುಪಡಿಸಿ) ವೆಚ್ಚದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ ಅಭಿವೃದ್ಧಿಪಡಿಸುವ, ಮೂಲಸೌಕರ್ಯ ಕಲ್ಪಿಸುವ ಕಾಮಗಾರಿವಿಚಾರದಲ್ಲಿ ರಾಜ್ಯದ ಹಣವನ್ನು ದುರ್ಬಳಕೆ ಮಾಡಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ದೂರಿದರು.
‘ಯೋಜನೆ ನಿರ್ಮಾಣಕ್ಕೆ ತಗಲುವ ವೆಚ್ಚ ಹಾಗೂ ನಿರ್ವಹಣೆಯನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಗೆ ವಹಿಸುವ ಮೂಲಕ ಆಂಧ್ರಪ್ರದೇಶ ಸರ್ಕಾರ ಹಾಗೂ ಅಲ್ಲಿನ ಖಾಸಗಿ ಕಂಪನಿಗಳಿಗೆ ಸಹಾಯ ಮಾಡಿಕೊಟ್ಟಿದ್ದಾರೆ.ವಾಸ್ತುವಿನ್ಯಾಸ, ಲ್ಯಾಂಡ್ ಸ್ಕೇಪಿಂಗ್ ಮತ್ತು ಒಳಾಂಗಣ ವಿನ್ಯಾಸವನ್ನು ಮೆ. ಗಾಯತ್ರಿ ಆಂಡ್ ನಮಿತ್ ಆರ್ಕಿಟೆಕ್ಟ್ಸ್ಗೆ (ಜಿಎನ್ಎ) ನೀಡಿ, ಅದಕ್ಕೆ ಕೆಟಿಪಿಪಿ ಕಾಯ್ದೆಯ ವಿನಾಯಿತಿ ಕೊಡಿಸಲಾಗಿದೆ. ಕಟ್ಟಡ ನಿರ್ಮಿಸಲು ನಮ್ಮಲ್ಲಿ ಯಾವುದೇ ಇಲಾಖೆಗಳು ಇರಲಿಲ್ಲವೇ? ರಾಜ್ಯಕ್ಕೆ ನಿರ್ವಹಣೆ ಮಾಡಲು ಸಾಧ್ಯವಿಲ್ಲವೇ? ಲೋಕೋಪಯೋಗಿ ಇಲಾಖೆ ಏನು ಮಾಡುತ್ತಿದೆ? ಜಾಗ ನಮ್ಮದು, ಹಣ ನಮ್ಮದು, ನಿರ್ಮಿಸುವವರು ಅವರು. ನಮ್ಮಲ್ಲಿ ವಿನ್ಯಾಸಕಾರರು, ತಾಂತ್ರಿಕ ತಜ್ಞರು ಇರಲಿಲ್ಲವೇ’ ಎಂದು ಪ್ರಶ್ನಿಸಿದರು.
ದಸರೆ ಸಿದ್ಧತೆ ಹಾಗೂ ಕೋವಿಡ್ ಪರಿಸ್ಥಿತಿಯಲ್ಲಿ 29 ದಿನಗಳಲ್ಲಿ ಕನ್ನಡದ ಐಎಎಸ್ ಅಧಿಕಾರಿ ಬಿ.ಶರತ್ ವರ್ಗಾ ವಣೆ ಮಾಡಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ಪ್ರಶ್ನಿಸಿದರು.
ವರ್ಗಾವಣೆ ದಂಧೆ: ‘ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಮೈಸೂರಿನಲ್ಲಿ ಒಂದು ವರ್ಷದ ಅವಧಿಗೆ ಇನ್ಸ್ಪೆಕ್ಟರ್ ವರ್ಗಾವಣೆಗೆ ₹ 20 ಲಕ್ಷ ಕೇಳಲಾಗುತ್ತಿದೆ’ ಎಂದು ಸಾ.ರಾ.ಮಹೇಶ್ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.