
ಸರಗೂರು: ಪಟ್ಟಣದ ಮಹಾವೀರ ವೃತ್ತದ ಬಳಿಯ ಗಾಣಿಗ ಸಮಾಜ ಹಾಗೂ ಸೇವಾಭಿವೃದ್ಧಿ ಟ್ರಸ್ಟ್ನ ಮಹಾಗಣಪತಿ ದೇವಸ್ಥಾನದಲ್ಲಿ 5ನೇ ವಾರ್ಷಿಕೋತ್ಸವ ಹಾಗೂ ಮಹಾ ಶಿವರಾತ್ರಿ ಅಂಗವಾಗಿ ಭಾನುವಾರ ವಿಶೇಷ ಪೂಜೆ ನೆರವೇರಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ನವಗ್ರಹ ಹೋಮ, ದುರ್ಗಾಹೋಮ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ನಂತರ ಅನ್ನ ಸಂತರ್ಪಣೆ ನಡೆಸಲಾಯಿತು.
ಬೆಂಗಳೂರಿನ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೂರ್ಣಾನಂದ ಪುರಿ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣ ಪಡೆದಾಗ ಮಾತ್ರ ಗಾಣಿಗ ಸಮಾಜ ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಕಾಣಲಿದೆ. ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.
‘ಸಮಾಜ ಸದೃಢವಾಗಲು ಗ್ರಾಮೀಣ ಭಾಗದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕು. ಉಳ್ಳವರು, ಹಿಂದುಳಿದವರ ನೆರವಿಗೆ ಧಾವಿಸಬೇಕು, ಆಗ ಮಾತ್ರ ಗಾಣಿಗ ಸಮಾಜ ಉನ್ನತಮಟ್ಟಕ್ಕೆ ಏರಲಿದೆ’ ಎಂದು ಹೇಳಿದರು.
‘ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಲ್ಲಿ ಬೆಂಗಳೂರಿನ ನಮ್ಮ ಮಠಕ್ಕೆ ಕಳುಹಿಸಿ ನಾವು ಶಿಕ್ಷಣ ಮತ್ತು ಆರೋಗ್ಯ, ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆವೆ’ ಎಂದು ಪೋಷಕರಿಗೆ ತಿಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಸೋಮಶೇಖರ್ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ಟ್ರಸ್ಟ್ ಅಧ್ಯಕ್ಷ ಶಿವಲಿಂಗಶೆಟ್ಟಿ, ಪ್ರಧಾನ ಸಣ್ಣಸ್ವಾಮಿಶೆಟ್ಟಿ, ಕಾರ್ಯದರ್ಶಿ ವೆಂಕಟರಾಮು, ಸಂಘಟನಾ ಕಾರ್ಯದರ್ಶಿ ದಿನೇಶ್ ಕುಮಾರ್, ಗೌರವಾಧ್ಯಕ್ಷ ಮಾದಶೆಟ್ಟಿ, ಉಪಾಧ್ಯಕ್ಷ ನಂಜುಂಡಶೆಟ್ಟಿ, ಖಜಾಂಚಿ ಕೆಂಡಗಣ್ಣಸ್ವಾಮಿ, ಸಮಿತಿ ಸದಸ್ಯರಾದ ಶಿವಣ್ಣ, ಬಸವರಾಜು, ಕಾರಯ್ಯ, ನಾಗಶೆಟ್ಟಿ, ವಕೀಲ ಶ್ರೀನಿವಾಸ್, ನಾಗರಾಜು, ಗ್ರಾಮದ ಯಜಮಾನರಾದ ಸೋಮಶೆಟ್ಟಿ, ಜಯರಾಮ, ಮಹದೇವಶೆಟ್ಟಿ, ಕೃಷ್ಣ ಶೆಟ್ಟಿ, ನಾಗರಾಜು, ಸಮಾಜದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.