ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆ ಠಾಣಾ ವ್ಯಾಪ್ತಿಯ ನವಿಲೂರು ಗ್ರಾಮದಲ್ಲಿ ಶನಿವಾರ ಮದ್ಯಪಾನಕ್ಕೆ ಹಣ ನೀಡಲಿಲ್ಲ ಎಂದು ಮಗನೇ ತಾಯಿಯನ್ನು ಹತ್ಯೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಗೌರಮ್ಮ (60) ಮೃತರು, ಆಕೆಯ ಮಗ ಸ್ವಾಮಿ (40) ಹತ್ಯೆಯ ಆರೋಪಿ. ಎರಡು ತಿಂಗಳ ಹಿಂದೆ ಗಂಡನ ಆರೋಗ್ಯ ಹದಗೆಟ್ಟಿದ್ದರಿಂದ ಒಂದು ಜೊತೆ ದನಗಳನ್ನು ಮಾರಾಟ ಮಾಡಿ ₹ 90 ಸಾವಿರ ಮೊತ್ತವನ್ನು ಗೌರಮ್ಮ ಜೋಪಾನವಾಗಿ ಇಟ್ಟಿದ್ದರು. ಮದ್ಯಪಾನಕ್ಕಾಗಿ ಹಣ ನೀಡುವಂತೆ ಸ್ವಾವಿ ಪ್ರತಿದಿನ ಪೀಡಿಸುತ್ತಿದ್ದ . ಆತನ ಕಿರುಕುಳ ತಾಳಲಾರದೆ ಗೌರಮ್ಮ ಪತಿಯೊಂದಿಗೆ ಗ್ರಾಮದ ಮನೆ ತೊರೆದು ಜಮೀನಿನಲ್ಲಿರುವ ಮನೆಗೆ ಹೋಗಿ ವಾಸ ಮಾಡುತ್ತಿದ್ದರು.
ಆದರೆ ಶನಿವಾರ ಸಂಜೆ ಪತಿಯು ಹುಷಾರಿಲ್ಲದ ಕಾರಣ ಚಿಕಿತ್ಸೆ ಪಡೆಯುವುದಕ್ಕೆ ಆಸ್ಪತ್ರೆಗೆ ತೆರಳಿದ ಸಂದರ್ಭ, ಸ್ಥಳಕ್ಕೆ ಬಂದ ಸ್ವಾಮಿ ಹಣ ನೀಡುವಂತೆ ಒತ್ತಾಯಿಸಿದಾಗ, ಗೌರಮ್ಮ ಹಣವಿಲ್ಲ ಎಂದು ಹೇಳಿದ್ದರು. ಕೋಪಗೊಂಡ ಮಗ ಕೈಯಲ್ಲೇ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಕೂಡಲೇ ಬಂಧಿಸಲಾಗಿದೆ. ಬೈಲಕುಪ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಪಿರಿಯಾಪಟ್ಟಣ ಪಿಐ ಗೋವಿಂದರಾಜು, ಬೈಲಕುಪ್ಪೆ ಪಿಎಸ್ ಐ ಡಿ. ಆರ್. ರವಿಕುಮಾರ್, ಸಿಬ್ಬಂದಿ ಮುದ್ದುರಾಜ್, ರುದ್ರೇಶ್, ಕುಮಾರಸ್ವಾಮಿ ಸ್ಥಳದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.