
ಮೈಸೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಭಾನುವಾರ ಚಾಮುಂಡಿವಿಹಾರ ಕ್ರೀಡಾ ಸಂಕೀರ್ಣದಲ್ಲಿನ ಮಹಿಳೆಯರ ಕ್ರೀಡಾ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹಾಸ್ಟೆಲ್ ಕಟ್ಟಡ ಹಾಗೂ ಸುತ್ತಮುತ್ತ ಸ್ವಚ್ಛತೆಯ ಕೊರತೆ ಇದ್ದು, ವಿಷಜಂತುಗಳು ಹರಿದಾಡುತ್ತಿರುವ ಕುರಿತು ಹಾಗೂ ಕೊಠಡಿಗಳ ಕಿಟಕಿಗಳಿಗೆ ಮೆಶ್ ಇಲ್ಲದಿರುವ ಬಗ್ಗೆ ವಿದ್ಯಾರ್ಥಿನಿಯರು ದೂರಿದರು. ಸ್ನಾನದ ಕೋಣೆ ಹಾಗೂ ಶೌಚಾಲಯಗಳ ಅವ್ಯವಸ್ಥೆ, ಆಹಾರ ವಿತರಣೆಯಲ್ಲಿ ಗುಣಮಟ್ಟದ ಕೊರತೆ ಹಾಗೂ ತಾರತಮ್ಯದ ಕುರಿತೂ ಉಪ ಲೋಕಾಯುಕ್ತರು ಮಾಹಿತಿ ಪಡೆದರು.
ಒಳಾಂಗಣ ಕ್ರೀಡಾಂಗಣವನ್ನು ಬಾಡಿಗೆಗೆ ನೀಡುತ್ತಿದ್ದು, ಬಾಡಿಗೆಗೆ ಪಡೆದವರು ಸ್ವಚ್ಛಗೊಳಿಸದೇ ಹೋದಲ್ಲಿ ವಿದ್ಯಾರ್ಥಿಗಳೇ ಅದನ್ನು ಸ್ವಚ್ಛಗೊಳಿಸುವಂತೆ ಹೇಳುತ್ತಿರುವುದಾಗಿ ದೂರುಗಳು ಬಂದವು. ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ, ಕೆಟ್ಟು ನಿಂತ ಕಂಪ್ಯೂಟರ್, ಎರಡು ವರ್ಷದಿಂದ ಬಂದ್ ಆಗಿರುವ ಜನರೇಟರ್ ಮೊದಲಾದವುಗಳ ಕುರಿತು ಫಣೀಂದ್ರ ಮಾಹಿತಿ ಪಡೆದರು.
‘ಇಂತಹ ಅವ್ಯವಸ್ಥೆಯುಳ್ಳ ವಿದ್ಯಾರ್ಥಿನಿಲಯವನ್ನು ನಾನೆಂದೂ ಕಂಡಿಲ್ಲ’ ಎಂದು ಅಸಮಾಧಾನಗೊಂಡ ಉಪ ಲೋಕಾಯುಕ್ತರು, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ಹೇಳಿದರು. ‘ಇಲ್ಲಿನ ವಾರ್ಡನ್ ನೇತ್ರಾ ಎಂಬುವರನ್ನು ಬದಲಿಸಿ, ಕಾಯಂ ಸಿಬ್ಬಂದಿಯನ್ನು ಈ ಕೆಲಸಕ್ಕೆ ನಿಯೋಜಿಸಿ’ ಎಂದು ಸೂಚಿಸಿದರು.
ಎರಡು ತಿಂಗಳ ಒಳಗೆ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ, ಅನುಪಾಲನಾ ವರದಿ ಸಲ್ಲಿಸುವುದಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕ ಭಾಸ್ಕರ್ ನಾಯಕ್ ಹೇಳಿದರು.
ಲೋಕಾಯುಕ್ತ ಎಸ್.ಪಿ. ಟಿ.ಜೆ. ಉದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.