ADVERTISEMENT

ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದ ನೈಋತ್ಯ ರೈಲ್ವೆ, ಕೆಲ ರೈಲು ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 16:14 IST
Last Updated 4 ಡಿಸೆಂಬರ್ 2020, 16:14 IST

ಮೈಸೂರು: ಪ್ರಯಾಣಿಕರು, ಸಾರ್ವಜನಿಕರ ಬಹು ದಿನದ ಬೇಡಿಕೆಗೆ ಸ್ಪಂದಿಸಿದ ನೈಋತ್ಯ ರೈಲ್ವೆ, ಕೆಲ ರೈಲು ಸಂಚಾರ ಆರಂಭಿಸಲು ಸಜ್ಜಾಗಿದೆ.

ಮೈಸೂರು ವಿಭಾಗದಿಂದ ಹೊರಡುವ ಮತ್ತು ವಿಭಾಗದ ವ್ಯಾಪ್ತಿಯಲ್ಲಿ ಚಲಿಸುವ ಕಾಯ್ದಿರಿಸದ/ಸಂಪೂರ್ಣವಾಗಿ ಕಾಯ್ದಿರಿಸಿದ ಪ್ರಯಾಣಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಸಾಮಾನ್ಯ ಶುಲ್ಕದೊಂದಿಗೆ ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಈ ರೈಲುಗಳ ಸಂಚಾರದಿಂದ ಮೈಸೂರು ವಿಭಾಗದ ಪ್ರಯಾಣಿಕರಿಗೆ ಅಪಾರ ಅನುಕೂಲವಾಗಲಿದೆ. ಇವು ರಾಜ್ಯ ಹಾಗೂ ನೆರೆಯ ರಾಜ್ಯಗಳ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸಲಿವೆ. ಕೋವಿಡ್‌ನಿಂದ ರೈಲ್ವೆ ಸೇವೆ ರದ್ದಾದ ಬಳಿಕ ಮೈಸೂರು ವಿಭಾಗದಲ್ಲಿ ಚಲಿಸುತ್ತಿರುವ ಎಕ್ಸ್‌ಪ್ರೆಸ್ ರೈಲುಗಳು ಇವುಗಳಾಗಿವೆ ಎಂದು ನೈಋತ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಈ ರೈಲುಗಳ ಬಳಕೆ ಅವಲಂಬಿಸಿ, ಮುಂದಿನ ವಿಸ್ತರಣೆ ಪರಿಗಣಿಸಲಾಗುತ್ತದೆ. ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಮುಖಕವಚ ಧರಿಸುವುದು, ನೈರ್ಮಲ್ಯೀಕರಣ ಇತ್ಯಾದಿಗಳನ್ನು ಒಳಗೊಂಡಂತೆ ಕೋವಿಡ್‌-19ಗೆ ಸಂಬಂಧಿಸಿದ ರಾಜ್ಯ–ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೈಋತ್ಯ ರೈಲ್ವೆ ಪ್ರಯಾಣಿಕರಿಗೆ ಮನವಿ ಮಾಡಿದೆ.

ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳು: ಮೈಸೂರು–ತಾಳಗುಪ್ಪ(ಪ್ರತಿ ದಿನ, ಡಿ.9ರಿಂದ 18), ಮೈಸೂರು–ಬಾಗಲಕೋಟೆ,ಕೆ.ಎಸ್.ಆರ್. ಬೆಂಗಳೂರು–ಧಾರವಾಡ,ಕೆ.ಎಸ್.ಆರ್. ಬೆಂಗಳೂರು–ಮೀರಜ್,ಕೆ.ಎಸ್.ಆರ್. ಬೆಂಗಳೂರು–ತಾಳಗುಪ್ಪ (ಪ್ರತಿ ದಿನ, ಡಿ.7ರಿಂದ 16).

ಕಾಯ್ದಿರಿಸದ ರೈಲುಗಳು: ಮೈಸೂರು–ಕೆ.ಎಸ್.ಆರ್.ಬೆಂಗಳೂರು,ಮೈಸೂರು–ಚಾಮರಾಜನಗರ,ಯಶವಂತಪುರ–ಹಾಸನ, ಯಶವಂತಪುರ–ಹೊಸಪೇಟೆ, (ಪ್ರತಿ ದಿನ, ಡಿ.7ರಿಂದ 16), ಬಂಗಾರಪೇಟೆ–ಮೈಸೂರು (ಮೆಮು, ಭಾನುವಾರ ಹೊರತುಪಡಿಸಿ ವಾರಕ್ಕೆ 6 ದಿನ, ಡಿ.7ರಿಂದ 17).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.