ADVERTISEMENT

ಮೈಸೂರು: ಬೀದಿನಾಯಿ ದತ್ತು ಪಡೆದ ವಿದೇಶಿಗರು!

ಮಹಾನಗರ ಪಾಲಿಕೆಯಿಂದ ಅಭಿಯಾನ: ಸಂಘ–ಸಂಸ್ಥೆಗಳ ಸಾಥ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:44 IST
Last Updated 17 ಡಿಸೆಂಬರ್ 2025, 6:44 IST
ಟೌನ್‌ಹಾಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿದೇಶಿ ಯುವತಿಯರಿಬ್ಬರಿಗೆ ನಾಯಿ ಮರಿಗಳನ್ನು ಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸಿಫ್‌ ದತ್ತು ನೀಡಿದರು. ಡಾ. ವೆಂಕಟೇಶ್, ತಿರುಮಲೇಶ್‌ ಜೊತೆಗಿದ್ದರು ಪ್ರಜಾವಾಣಿ ಚಿತ್ರ
ಟೌನ್‌ಹಾಲ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿದೇಶಿ ಯುವತಿಯರಿಬ್ಬರಿಗೆ ನಾಯಿ ಮರಿಗಳನ್ನು ಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸಿಫ್‌ ದತ್ತು ನೀಡಿದರು. ಡಾ. ವೆಂಕಟೇಶ್, ತಿರುಮಲೇಶ್‌ ಜೊತೆಗಿದ್ದರು ಪ್ರಜಾವಾಣಿ ಚಿತ್ರ   

ಮೈಸೂರು: ನಗರದಲ್ಲಿನ ಬೀದಿನಾಯಿ ಮರಿಗಳಿಗೆ ನೆಲೆ ಒದಗಿಸಲು ಮಹಾನಗರ ಪಾಲಿಕೆಯು ಮುಂದಾಗಿದ್ದು, ಅಭಿಯಾನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಮರಿಗಳನ್ನು ದತ್ತು ನೀಡಲಾಯಿತು. ವಿದೇಶಿ ಯುವತಿಯರಿಬ್ಬರು ದತ್ತು ಪಡೆದಿದ್ದು ವಿಶೇಷವಾಗಿತ್ತು.

ಟೌನ್‌ಹಾಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು ಐದು ಮರಿಗಳನ್ನು ದತ್ತು ನೀಡಲಾಯಿತು. ವಿದೇಶಿಯರೊಟ್ಟಿಗೆ ಪಾಲಿಕೆ ಅಧಿಕಾರಿ ಪ್ರತಿಮಾ ಎರಡು ಮರಿಗಳನ್ನು ಹಾಗೂ ಆನಂದ್ ಎಂಬುವರು ಒಂದು ಮರಿಯನ್ನು ದತ್ತು ಪಡೆದರು.

ಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸಿಫ್‌ ಮಾತನಾಡಿ, ‘ಪಾಲಿಕೆಯು ಪ್ರಾಣಿಗಳ ಕಲ್ಯಾಣದತ್ತ ತನ್ನ ಭಾಗವಾಗಿ ಬೀದಿ ನಾಯಿಮರಿಗಳ ದತ್ತು ಸ್ವೀಕಾರ ಅಭಿಯಾನವನ್ನು ಆರಂಭಿಸಿದೆ. ನಾಯಿಮರಿಗಳಿಗೆ ಸುರಕ್ಷಿತ ಮನೆ ಒದಗಿಸುವುದರ ಜೊತೆಗೆ ಜವಾಬ್ದಾರಿಯುತ ದತ್ತು ಸ್ವೀಕಾರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಬೀದಿಬದಿಯಲ್ಲಿನ ಪ್ರಾಣಿಗಳ ನಿರ್ವಹಣೆಗೆ ಸಾರ್ವಜನಿಕ ಸಹಭಾಗಿತ್ವ ಮುಖ್ಯವಾಗಿದೆ’ ಎಂದರು.

ADVERTISEMENT

‘ಸಕ್ರಿಯ ದತ್ತು ಸ್ವೀಕಾರ ನಿಷ್ಕ್ರಿಯ ದತ್ತು ಸ್ವೀಕಾರ ಎಂಬ ಎರಡು ಬಗೆಯ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಕ್ರಿಯ ದತ್ತು ಸ್ವೀಕಾರದ ಮೂಲಕ ನಾಗರಿಕರು ಬೀದಿ ನಾಯಿಮರಿಗಳಿಗೆ ಶಾಶ್ವತ ಮನೆ ಒದಗಿಸಬಹುದು. ನಿಷ್ಕ್ರಿಯ ದತ್ತು ಸ್ವೀಕಾರದಲ್ಲಿ ಬೀದಿ ಪ್ರಾಣಿಗಳ ಆರೈಕೆ, ಆಹಾರ ಪೂರೈಕೆ, ಲಸಿಕೀಕರಣ, ಸಹಬಾಳ್ವೆಯಂತಹ ಅಂಶಗಳು ಸೇರಿವೆ’ ಎಂದು ತಿಳಿಸಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ಎನ್‌.ಪಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಪೂರ್ಣದಾ, ನಿವೃತ್ತ ಉಪ ನಿರ್ದೇಶಕ ಡಾ. ತಿರುಮಲೇಶ್, ನಿವೃತ್ತ ಪಶುವೈದ್ಯ ಡಾ. ಸುರೇಶ್, ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಸವಿತಾ ನಾಗಭೂಷಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.