ಮೈಸೂರು: ‘ಸರ್ಕಾರಿ ಶಾಲಾ, ಕಾಲೇಜು ಮಕ್ಕಳಿಗೆ ಅನೇಕ ಸೌಲಭ್ಯ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಅವನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕಿ ಎಂ.ಪಿ.ನಾಗಮ್ಮ ತಿಳಿಸಿದರು.
ದೇವರಾಜ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಶಾಲಾ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ಸಮಾಜವು ಸ್ವಾರ್ಥವನ್ನಷ್ಟೇ ಯೋಚಿಸುತ್ತಿದೆ. ಸ್ವಂತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳಾಗುತ್ತಿದ್ದಾರೆ. ಲೆಕ್ಕಾಚಾರದ ವ್ಯಕ್ತಿಗಳ ನಡುವೆ ಸಮಾಜ ಗುರುತಿಸುವವರಾಗಿ ಬೆಳೆಯಬೇಕು. ಈ ಕಾಲೇಜಿನಲ್ಲಿನ ದಾನಿಗಳು ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ಶಾಲೆಯ ಕಟ್ಟಡ ನಿರ್ಜೀವ ವಸ್ತು. ಅಲ್ಲಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಂಬಂಧವು ಕಟ್ಟಡಕ್ಕೆ ಜೀವ ತುಂಬುತ್ತವೆ. ಖಾಸಗಿ ಕಾಲೇಜಿನಲ್ಲಿ ಫಲಿತಾಂಶ ತರುವುದು ದೊಡ್ಡ ವಿಚಾರವಲ್ಲ. ಅಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರನ್ನಷ್ಟೇ ಪರಿಗಣಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳ ಎಲ್ಲಾ ಸ್ತರಗಳ ವಿದ್ಯಾರ್ಥಿಗಳಿಗೂ ದಾಖಲಾತಿ ನೀಡಿ, ಅವರನ್ನು ಸಮಾಜಮುಖಿಯಾಗಿ ಬೆಳೆಸುತ್ತಿರುವುದು ಮಹತ್ಕಾರ್ಯ’ ಎಂದು ಹೇಳಿದರು.
‘ಸರ್ಕಾರವು ಉಚಿತ ಪಠ್ಯಪುಸ್ತಕವನ್ನೂ ನೀಡುತ್ತಿದೆ. ಅದರ ಸದುಪಯೋಗ ಪಡೆಯಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು. ವಿದ್ಯಾಭ್ಯಾಸದ ಕಾಲದಲ್ಲಿ ಸುಖ, ನಿದ್ರೆ ಬಯಸದೆ ಓದಿನ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.
ಉನ್ನತ ಸ್ಥಾನಗಳಲ್ಲಿ ತೇರ್ಗಡೆ ಹೊಂದಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಎಚ್.ಎಸ್.ಗಿರಿಜಾಂಭ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ನಾಗಭೂಷಣ್, ಸದಸ್ಯರಾದ ರಾಮೇಗೌಡ, ಸುವರ್ಣಮ್ಮ, ಸ್ವಪ್ರಭಾನಂದ ಸ್ವಾಮೀಜಿ, ಕಾಲೇಜು ಪ್ರಾಂಶುಪಾಲ ಎಂ.ಜಿ.ರಮಾನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.