ADVERTISEMENT

ಬಿಜೆಪಿಗೆ ಮತ ಹಾಕಿದ್ದು ಎಷ್ಟು ಸರಿ, ನಮ್ಮ ಪ್ರಶ್ನೆ ತಪ್ಪಲ್ಲ: ಸುಧಾಕರ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 10:00 IST
Last Updated 29 ಜೂನ್ 2019, 10:00 IST
 ಡಾ.ಕೆ.ಸುಧಾಕರ್
 ಡಾ.ಕೆ.ಸುಧಾಕರ್   

ಮೈಸೂರು:‘ಕಳೆದ ಆರು ವರ್ಷಗಳಿಂದ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯ ಸರ್ಕಾರವನ್ನು ಬದಿಗಿಟ್ಟು ಬಿಜೆಪಿಗೆ ಮತ ಹಾಕಿದ್ದು ಎಷ್ಟು ಸರಿ ಎಂಬ ಕಾಂಗ್ರೆಸ್ ಮುಖಂಡರ ಪ್ರಶ್ನೆಯಲ್ಲಿ ತಪ್ಪೇನಿಲ್ಲ’ ಎಂದು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಕಾಂಗ್ರೆಸ್‌ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ಅತ್ಯುತ್ತಮ ಕೆಲಸ ಮಾಡಿವೆ. ಇವುಗಳಿಗೆ ಆದ್ಯತೆ ನೀಡದೇ ಭಾವನಾತ್ಮಕ ವಿಚಾರಗಳಿಗೆ ಬಲಿಯಾಗಿ ಮತ ಹಾಕಿರುವುದರ ಕುರಿತು ನೋವನ್ನು ಕೆಲವರು ವ್ಯಕ್ತಪಡಿಸಿದ್ದಾರೆ ಅಷ್ಟೇ. ಕೆಲಸ ಮಾಡಿದ್ದರೂ ಸೋಲು ಕಂಡಿದ್ದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದರು.

‘ಯಾವಾಗ ಚುನಾವಣೆ ಬಂದರೂ ನಾವು ಎದುರಿಸಲು ಸನ್ನದ್ಧಾಗಿರಬೇಕು. ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯುವ ಸಮೂಹದ ವಿಶ್ವಾಸ ಗಳಿಸುವತ್ತ ಗಮನ ಹರಿಸಿದಾಗ ಮಾತ್ರವೇ ಕಾಂಗ್ರೆಸ್‌ಗೆ ಭವಿಷ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಹಸಿರು ಕರ್ನಾಟಕ–ಶುದ್ಧ ಕರ್ನಾಟಕ’
ಅಕ್ಟೋಬರ್‌ 2ರಂದು ‘ಹಸಿರು ಕರ್ನಾಟಕ ಶುದ್ಧ ಕರ್ನಾಟಕ’ ಎಂಬ ಯೋಜನೆ ಜಾರಿಗೆ ತರಲಾಗುವುದು. ಇದರನ್ವಯ ಅಂದಾಜು 10 ಕೋಟಿ ಸಸಿಗಳನ್ನು ರಾಜ್ಯದಲ್ಲಿ ನೆಡಲಾಗುವುದು ಎಂದು ಸುಧಾಕರ್‌ ತಿಳಿಸಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಸೇವಾದಳ ಇರುವಂತೆಯೇ ಪರಿಸರ ಸೈನಿಕ ಪಡೆಯನ್ನೂ ಕಟ್ಟಬೇಕಿದೆ. ಈ ಕುರಿತು ಪಕ್ಷದ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.