ಹಂಪಾಪುರ: ಇಲ್ಲಿಗೆ ಸಮೀಪದ ಚಾಮಹಳ್ಳಿ ಗ್ರಾಮದಲ್ಲಿನ 2 ಎಕರೆಯಲ್ಲಿದ್ದ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಬೆಳೆ ಸಂಪೂರ್ಣ ಹಾಳಾಗಿದೆ.
ಚಾಮಹಳ್ಳಿ ಗ್ರಾಮದ ಚಲುವೇಗೌಡ ಜಯಮ್ಮ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಬೆಂಕಿಗಾಹುತಿಯಾಗಿದ್ದು, 60 ಟನ್ ಕಬ್ಬು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಶುಕ್ರವಾರ ರಾತ್ರಿ 8.30ರ ಸಮಯದಲ್ಲಿ ಬೆಂಕಿ ಬಿದ್ದಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಗ್ರಾಮಸ್ಥರು ಬರುವಷ್ಟರಲ್ಲಿ ಜಮೀನಿನ ಎಲ್ಲಾ ಭಾಗಕ್ಕೂ ಬೆಂಕಿ ಹರಡಿದ್ದರಿಂದ ನಂದಿಸಲು ಸಾಧ್ಯವಾಗಿಲ್ಲ. 15 ದಿನದ ಹಿಂದಷ್ಟೇ 50 ಟನ್ ಕಬ್ಬು ಕಟಾವು ಮಾಡಿ ಮಾರಲಾಗಿತ್ತು. ಉಳಿದ 60 ಟನ್ ಕಬ್ಬನ್ನು ಕೊರೊನಾ ವೈರಸ್ ಹರಡುತ್ತಿರುವುದರಿಂದ ಕಟಾವು ಮಾಡಲಾಗಿರಲಿಲ್ಲ ಎಂಬುದು ತಿಳಿದು ಬಂದಿದೆ.
ಬೆಂಕಿಗೆ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.