
ಪಿರಿಯಾಪಟ್ಟಣ: ‘ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಸಮಾಜಸೇವಾ ಕಾರ್ಯಗಳು ಇಂದಿನ ಯುವಕರಿಗೆ ಮಾದರಿಯಾಗಿವೆ’ ಎಂದು ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಜಿ.ಪರಮೇಶ್ ತಿಳಿಸಿದರು.
ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.15 ರಿಂದ ಜ.20 ರವರೆಗೆ ಜಾತ್ರೆ ನಡೆಯಲಿದೆ. ಇದು ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವಾಗಿದ್ದು, ಆರು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸ್ಪರ್ಧಾ ಕಾರ್ಯಕ್ರಮಗಳು ಜರುಗಲಿವೆ, ಕೇವಲ ಜಾತ್ರೆ ಆಗಿರದೆ ಸಾಂಸ್ಕೃತಿಕ, ಧಾರ್ಮಿಕ ಸಮ್ಮೇಳನವಾಗಿದೆ’ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಯೋಗ ಮಾತನಾಡಿ, ‘ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಜನರಿಗೆ ಭಕ್ತಿಯ ಜೊತೆಗೆ ಜ್ಞಾನವು ಲಭಿಸಲಿದ್ದು, ಶರಣ ಸಂಸ್ಕೃತಿಯ ಅನಾವರಣದ ಜೊತೆಗೆ ಸಾಹಿತ್ಯ, ಕೃಷಿ, ನಾಟಕ ಮುಂತಾದ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜ್ಞಾನಾರ್ಜನೆ ಹೊಂದಬೇಕು’ ಎಂದು ತಿಳಿಸಿದರು.
ವೀರಶೈವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಮಾತನಾಡಿ, ‘ಜಾತ್ರಾ ಮಹೋತ್ಸವದ ಅಂಗವಾಗಿ ಪಿರಿಯಾಪಟ್ಟಣದಲ್ಲಿ ಎರಡು ದಿನಗಳ ಕಾಲ ಪ್ರಚಾರ ನಡೆಸಲಾಗುವುದು’ ಎಂದು ತಿಳಿಸಿದರು.
ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಮಂಜುನಾಥ್ ಸ್ವಾಮಿ, ಪುರಸಭಾ ಮಾಜಿ ಸದಸ್ಯರಾದ ನಿರಂಜನ್, ಮಲ್ಲಿಕಾರ್ಜುನ್, ಮಹಾಸಭಾ ಮಾಜಿ ಕಾರ್ಯದರ್ಶಿ ಮುಖೇಶ್, ಯುವ ಘಟಕದ ಅಧ್ಯಕ್ಷ ಅಭಿ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ಮುಖಂಡರಾದ ಶಿವಮೂರ್ತಿ, ಯುವರಾಜ್, ವೃಷಭೇಂದ್ರಪ್ಪ, ವಿಜಿ, ಪುಟ್ಟರಾಜು ಹಾಗೂ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.