
ಮೈಸೂರು: ‘ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಮೌಲ್ಯ, ಶಾರದಾ ಮಾತೆಯ ಮಾನವೀಯ ಸಂದೇಶ ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳೇ ಯುವ ಸಮುದಾಯವನ್ನು ಸತ್ಪ್ರಜೆಯನ್ನಾಗಿ ರೂಪಿಸುತ್ತಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಪ್ರಯುಕ್ತ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯ ವಿವೇಕಾನಂದ ಸಭಾಂಗಣದಲ್ಲಿ ಭಾನುವಾರ ನಡೆದ ‘ಸಾಹಿತ್ಯ ಸೇವೆ’ ರಾಮಕೃಷ್ಣ ಆಶ್ರಮದ ಕನ್ನಡ ಪ್ರಕಟಣೆಗಳು ಮತ್ತು ‘ವಿವೇಕಪ್ರಭ’ ಮಾಸಪತ್ರಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನೂರು ವರ್ಷಗಳಲ್ಲಿ ಮೈಸೂರಿನ ಆಶ್ರಮ ಮಾಡಿರುವ ಸಾಧನೆ ಜಗತ್ತಿನ ಹತ್ತಾರು ಸಂಸ್ಥೆಗಳಿಗೆ ಮಾರ್ಗದರ್ಶಿ. ಸಾಮಾಜಿಕ ಬದ್ಧತೆ ಮತ್ತು ಆಧ್ಯಾತ್ಮಿಕ ಸೇವೆ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಕ್ತಿದಾಯಕ ವಿಚಾರಧಾರೆಗಳನ್ನು ಆಶ್ರಮ ತುಂಬುತ್ತಿದೆ. ಸ್ವಾಮಿ ವಿವೇಕಾನಂದರು ಹಾಗೂ ಸನಾತನ ಧರ್ಮ ಆದೇಶಿಸಿದ ಪಥದಲ್ಲಿ ಮುನ್ನಡೆದು ರಾಷ್ಟ್ರವನ್ನು ಸಮರ್ಥವಾಗಿ ಕಟ್ಟಲು ನಾವೆಲ್ಲರೂ ಬದ್ಧರಾಗಬೇಕು’ ಎಂದರು.
ಸ್ಮಾರಕ ಉದ್ಘಾಟನೆಗೆ ಮೋದಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಆಶ್ರಮದಿಂದ ನಿರ್ಮಾಣಗೊಳ್ಳುತ್ತಿರುವ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಲು ಅವರು ಬಂದೇ ಬರುತ್ತಾರೆ. ಬರಬೇಕೆನ್ನುವುದು ನಮ್ಮ ಆಶಯ’ ಎಂದು ಹೇಳಿದರು.
ಸಾಹಿತಿ ಎಚ್.ಲಕ್ಷ್ಮೀನರಸಿಂಹ ಶಾಸ್ತ್ರಿ, ನಿವೃತ್ತ ಪ್ರಾಧ್ಯಾಪಕರಾದ ಕೆ.ಎಲ್.ಪ್ರಸನ್ನಾಕ್ಷಿ, ಕೆ.ಅನಂತರಾಮು, ಎಚ್.ಎನ್.ಮುರಳೀಧರ ಹಾಗೂ ಮಯೂರ್ ಗ್ರಾಫಿಕ್ಸ್ನ ಪಾರ್ಥಸಾರಥಿ ಅವರನ್ನು ಅಭಿನಂದಿಸಲಾಯಿತು.
ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿದರು. ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದ, ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ರಾಮಕೃಷ್ಣ ವೇದಾಂತ ಕೇಂದ್ರ ಮುಖ್ಯಸ್ಥ ಸ್ವಾಮಿ ಆತ್ಮಜ್ಞಾನಂದ, ಶಾಸಕ ಟಿ.ಎಸ್.ಶ್ರೀವತ್ಸ, ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಲೀಲಾ ಪ್ರಕಾಶ್, ವಿಶ್ರಾಂತ ಕುಲಪತಿ ಕೆ.ಚಿದಾನಂದ ಗೌಡ, ತಾರಿಣಿ ಚಿದಾನಂದ ಗೌಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಜರಿದ್ದರು.
ಶತಮಾನೋತ್ಸವದಲ್ಲಿ ಇಂದು ಉಷಾ ಕೀರ್ತನೆ
ಸ್ವಾಮಿ ಯೋಗೇಶ್ವರಾನಂದ ಸ್ವಾಮಿ ಸುಮೇಧಾನಂದ ಬೆಳಿಗ್ಗೆ 6.15 ಸಮರ್ಪಣಾ ಸಮಾವೇಶ ಸಾನ್ನಿಧ್ಯ– ರಾಮಕೃಷ್ಣ ಮಿಷನ್ ಪರಮಾಧ್ಯಕ್ಷ ಸ್ವಾಮಿ ಗೌತಮಾನಂದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅತಿಥಿ– ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅತಿಥಿಗಳು– ಸಂಸದ ಬಸವರಾಜ ಬೊಮ್ಮಾಯಿ ಶಾಸಕ ಬಿ.ವೈ.ವಿಜಯೇಂದ್ರ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸ್ಥಳ– ವಿವೇಕಾನಂದ ಸಭಾಂಗಣ ಬೆಳಿಗ್ಗೆ 9 ಭಗವನ್ನಾಮ ಸಂಕೀರ್ತನೆ– ಸ್ವಾಮಿ ಗಭೀರಾತ್ಮಾನಂದ ಜ್ಞಾನದಾಚೈತನ್ಯ ಸ್ವಾಮಿ ಪ್ರಜ್ಞಾತ್ಮಾನಂದ ಸ್ಥಳ– ವಿವೇಕಾನಂದ ಸಭಾಂಗಣ ಮಧ್ಯಾಹ್ನ 2.30 ವಿವೇಕಗಾಥಾ– ಸ್ವಾಮಿ ವಿವೇಕಾನಂದ ಕುರಿತ ಬಹುಮಾಧ್ಯಮ ಸಾಂಸ್ಕೃತಿಕ ಕಾರ್ಯಕ್ರಮ ಸಾನ್ನಿಧ್ಯ– ನಿರ್ಮಲಾನಂದನಾಥ ಸ್ವಾಮೀಜಿ ಅತಿಥಿಗಳು– ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಶಿವರಾಜ ತಂಗಡಗಿ ಸ್ಥಳ– ವಿದ್ಯಾಶಾಲಾ ಕ್ರೀಡಾಂಗಣ ಸಂಜೆ 5.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.