ಮೈಸೂರು: ಇಲ್ಲಿನ ರಮಾವಿಲಾಸ ರಸ್ತೆಯಲ್ಲಿ ಬೃಹತ್ ಗಾತ್ರದ ಗುಲ್ಮೊಹರ್ ಮರವೊಂದು ಬುಧವಾರ ಬೆಳಿಗ್ಗೆ ಧರೆಗುರುಳಿದ್ದು, 3 ಕಾರುಗಳು ಜಖಂಗೊಂಡಿವೆ.
‘ಬೆಳಿಗ್ಗೆ 6 ಗಂಟೆ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಮರವು ಮುರಿದು ಬಿದ್ದಿತು. ಈ ಸಮಯದಲ್ಲಿ ಹೆಚ್ಚಿನ ಜನಸಂಚಾರ ಇಲ್ಲದೇ ಇದ್ದುದ್ದರಿಂದ ಅನಾಹುತ ಸಂಭವಿಸಲಿಲ್ಲ. ಕಾರುಗಳನ್ನು ರಾತ್ರಿಯೇ ಮರದಡಿ ನಿಲುಗಡೆ ಮಾಡಲಾಗಿತ್ತು. ಕಾರಿನೊಳಗೂ ಜನರು ಇರಲಿಲ್ಲ. ಹೀಗಾಗಿ, ಪ್ರಾಣಾಪಾಯ ಸಂಭವಿಸಲಿಲ್ಲ’ ಎಂದು ಪಾಲಿಕೆಯ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಣಿಕಂಠ ತಿಳಿಸಿದ್ದಾರೆ.
ಮರವು ಸುಮಾರು 15 ವರ್ಷಕ್ಕಿಂತಲೂ ಹೆಚ್ಚು ಹಳೆಯದಾಗಿತ್ತು. ಕೊಂಬೆಗಳೆಲ್ಲವೂ ಸಂಪೂರ್ಣ ಟೊಳ್ಳಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಬೇರುಗಳು ಸಡಿಲಗೊಂಡಿದ್ದವು. ಇದರಿಂದ ಇದು ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಟೊಳ್ಳಾಗಿರುವುದನ್ನು ಗುರುತಿಸುವಲ್ಲಿ ಪಾಲಿಕೆ ವಿಫಲ: ಜುಲೈ 7ರಂದು ಇದೇ ರಸ್ತೆಯಲ್ಲಿ ಪಾಲಿಕೆಯು ಅಪಾಯದಂಚಿ
ನಲ್ಲಿರುವ ಮರಗಳನ್ನು ಗುರುತಿಸುವ ಕಾರ್ಯ ಆರಂಭಿಸಿತ್ತು. ಹಲವು ಮರಗಳ ರೆಂಬೆ, ಕೊಂಬೆಗಳನ್ನೂ ಕಡಿಯಲಾಗಿತ್ತು. ಆದರೆ, ಈ ಮರವು ಬೀಳುವ ಹಂತದಲ್ಲಿದೆ ಎಂಬುದನ್ನು ಗುರುತಿಸುವಲ್ಲಿ ಪಾಲಿಕೆ ಸಿಬ್ಬಂದಿ ವಿಫಲರಾಗಿದ್ದರು. ಇದರಿಂದಾಗಿಯೇ ಮರವು ಉರುಳಿದೆ. ಒಂದು ವೇಳೆ ಮಧ್ಯಾಹ್ನದ ವೇಳೆಯಾಗಿದ್ದ ಜನರು ಮರದಡಿ ಸಿಲುಕುವ ಅಪಾಯ ಇತ್ತು ಎಂದು ಸಮೀಪದ ಅಂಗಡಿಯೊಂದರ ಮಾಲೀಕರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.