
ಮೈಸೂರು: ‘ಜಿಲ್ಲೆಯ ಸರಗೂರು ತಾಲ್ಲೂಕಿನ ಮೋಹನ್ಕುಮಾರ ಸಿ. ರೈತರ ಮೇಲೆ ದಾಳಿ ಮಾಡುತ್ತಿರುವ ಹುಲಿಯನ್ನು ಸೆರೆ ಹಿಡಿಯದ ಅರಣ್ಯ ಇಲಾಖೆಯು, ಮರಿಗಳು ಸೇರಿದಂತೆ ಬೇರೆ ಹುಲಿಗಳನ್ನು ಸೆರೆ ಹಿಡಿಯುವ ಪರಿಪಾಠವನ್ನು ಒಂದು ತಿಂಗಳಿಂದ ನಡೆಸಿದೆ’ ಎಂಬ ಆಕ್ಷೇಪ ರೈತರು ಹಾಗೂ ಪರಿಸರ ಹೋರಾಟಗಾರರಲ್ಲಿ ವ್ಯಕ್ತವಾಗಿದೆ.
‘ಮಾನವ– ವನ್ಯಜೀವಿ ಸಂಘರ್ಷ ತಡೆಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳನ್ನು ಪಾಲಿಸುವಲ್ಲಿ ಇಲಾಖೆಯು ಸಂಪೂರ್ಣ ಎಡವಿದೆ’ ಎಂಬ ದೂರು ಕೇಳಿಬಂದಿದೆ.
ಕಾರ್ಯಾಚರಣೆಯ ವಿವರ, ಸೆರೆ ಸಿಕ್ಕ ಅಥವಾ ಸಂರಕ್ಷಿಸಿದ ಹುಲಿಯ ಆರೋಗ್ಯದ ಬಗ್ಗೆ ಪ್ರತಿ ನಿತ್ಯ ಮಾಹಿತಿ ಹಾಗೂ ಸುತ್ತೋಲೆ ಹೊರಡಿಸಬೇಕೆಂಬ ಎನ್ಟಿಸಿಎ ನಿಯಮವನ್ನು ಇಲಾಖೆ ಪಾಲಿಸುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ, ಬಿಳಿಗಿರಿರಂಗನಬೆಟ್ಟದಲ್ಲಿ ಸಿಕ್ಕಿದ 3 ತಬ್ಬಲಿ ಮರಿಗಳಲ್ಲಿ ಎರಡು ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮೃತಪಟ್ಟಿವೆ. ಸರಗೂರು ತಾಲ್ಲೂಕಿನಲ್ಲಿ ನಡೆದ ಈಚಿನ ಕಾರ್ಯಾಚರಣೆಯಲ್ಲಿ ಸಿಕ್ಕ 2 ಹುಲಿಗಳ ಸ್ಥಿತಿ ಏನಾಗಿದೆ ಎಂಬ ಮಾಹಿತಿಯನ್ನು ಇಲಾಖೆ ಬಿಡುಗಡೆ ಮಾಡಿಲ್ಲ.
ನಿಯಮ ಉಲ್ಲಂಘನೆ: ಹುಲಿ ಸೆರೆ ಕಾರ್ಯಾಚರಣೆ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಿ, ಜನರ ಸಂಚಾರವನ್ನು ನಿರ್ಬಂಧಿಸಬೇಕು. ಈ ಬಗ್ಗೆ ಊರುಗಳಲ್ಲಿ ಜನರಲ್ಲಿ ಅರಿವು ಮೂಡಿಸಿ, ಮನೆಯಿಂದ ಹೊರಬರದಂತೆ ಮಾಡಬೇಕು. ಆದರೆ, ಬಡಗಲಪುರ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸುವಾಗ ಸಾಕಾನೆಗಳು ಹಾಗೂ ಜನರಿಗೆ ಬೆದರಿದ ಹುಲಿ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಹದೇವು ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿತ್ತು.
ಮಹದೇವು ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡೂ ಕಣ್ಣುಗಳನ್ನು ಕಳೆದುಕೊಂಡು ಸಾವು– ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಆ ನಂತರ ಹುಲಿ ದಾಳಿಗೆ ಮೂವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ.
‘ಒಂದೆಡೆ ವ್ಯಕ್ತಿಗಳ ಮೇಲೆ ದಾಳಿ ಮಾಡದ ಹುಲಿಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇನ್ನೊಂದೆಡೆ ಮಾನವ- ವನ್ಯಜೀವಿ ಸಂಘರ್ಷ ತಪ್ಪಿಸಲು ವೈಜ್ಞಾನಿಕ ಕ್ರಮ ಅನುಸರಿಸಬೇಕಾದ ಇಲಾಖೆಯ ಮೇಲಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಜವಾಬ್ದಾರಿ ಪ್ರದರ್ಶಿಸುತ್ತಿಲ್ಲ. ಕೆಳ ಹಂತದ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಸುತ್ತಿದ್ದಾರೆ’ ಎಂದು ಪರಿಸರ ಹೋರಾಟಗಾರರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘18 ತಿಂಗಳ 2 ಮರಿಗಳು ಸೇರಿದಂತೆ 4 ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಯಾವ ಹುಲಿ ಕೊಲ್ಲುತ್ತಿದೆ ಎಂಬುದನ್ನು ಗುರುತಿಸದೇ ಅವುಗಳನ್ನು ಹಿಡಿಯಲಾಗುತ್ತಿದೆ. ಡಿಎನ್ಎ ವಿಶ್ಲೇಷಣೆ ಸೇರಿದಂತೆ ಯಾವೊಂದು ನಿಯಮ ಪಾಲಿಸಿಲ್ಲ. ಈ ಅಸ್ಪಷ್ಟತೆಯ ನಡೆಗೆ ಬಡ ರೈತರು ಬಲಿಯಾಗುತ್ತಿದ್ದಾರೆ’ ಎನ್ನುತ್ತಾರೆ ಮತ್ತೊಬ್ಬ ಹೋರಾಟಗಾರ ಜೋಸೆಫ್ ಹೂವರ್.
‘ವಯಸ್ಸಾದ ಹುಲಿ ಇರಬಹುದು’
‘7 ವರ್ಷದ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಬ್ಬರ ಮೇಲೆ ವಯಸ್ಸಾದ ಹುಲಿಯೊಂದು ದಾಳಿ ನಡೆಸಿತ್ತು. ಅದಕ್ಕೆ ಹಲ್ಲುಗಳು ಇಲ್ಲದ್ದರಿಂದ ತಿನ್ನಲು ಆಗಿರಲಿಲ್ಲ. ಈಗಲೂ ದಾಳಿ ಮಾಡುತ್ತಿರುವ ಹುಲಿಗೆ ವಯಸ್ಸಾಗಿರುವ ಸಾಧ್ಯತೆಯಿದೆ. ಅದನ್ನು ಹುಡುಕುವುದು ಸವಾಲೇ ಆಗಿದೆ. ಕೆಲವೇ ದಿನಗಳಲ್ಲಿ ನೈಸರ್ಗಿಕವಾಗಿ ಸಾಯಲಿದೆ’ ಎಂದು ‘ಗ್ರೀನ್ ಆಸ್ಕರ್’ ಪುರಸ್ಕೃತ ವನ್ಯಜೀವಿ ಛಾಯಾಚಿತ್ರಗ್ರಾಹಕರಾದ ಕೃಪಾಕರ– ಸೇನಾನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಂಡೀಪುರ ನಾಗರಹೊಳೆ ಸೇರಿದಂತೆ ನಮ್ಮ ಕಾಡುಗಳನ್ನು ಶೇ 60ರಷ್ಟು ಲಂಟಾನ ಕಳೆ ಆವರಿಸಿದೆ. ಮೇವು ಇಲ್ಲದ್ದರಿಂದ ಬಲಿ ಪ್ರಾಣಿಗಳು ಕಡಿಮೆಯಾಗಿವೆ. ಆಹಾರ ಸಿಗುತ್ತಿಲ್ಲವಾದ್ದರಿಂದ ಹುಲಿಗಳು ಕಾಡಂಚಿಗೆ ಬರುತ್ತಿವೆ. ಹುಲಿ ಯೋಜನೆ ಅನುಷ್ಠಾನದ ನಂತರ ಹುಲಿಗಳ ಸಾಂದ್ರತೆಯೂ ಹೆಚ್ಚಾಗಿದೆ. ಹೀಗಾಗಿ ಹೊಸ ನೆಲೆಗಳನ್ನು ಹುಡುಕಲು ಹುಲಿಗಳು ಮುಂದಾಗುತ್ತಿವೆ. ಆಗ ಉಂಟಾಗುತ್ತಿರುವ ಸಂಘರ್ಷವನ್ನು ತಪ್ಪಿಸಲು ವೈಜ್ಞಾನಿಕ ಕ್ರಮ ಅನುಸರಿಸಬೇಕು’ ಎಂದರು.
ಹುಲಿ ದಾಳಿಗಳು
* ಅ.16: ಸರಗೂರು ತಾಲ್ಲೂಕಿನ ಬಡಗಲಪುರದಲ್ಲಿ ಕಾರ್ಯಾಚರಣೆ ನಡೆಸಿದ್ದಾಗ ರೈತ ಮಹದೇವ್ ಮೇಲೆ ಹುಲಿ ದಾಳಿ ನಡೆಸಿದ್ದು ತೀವ್ರ ಗಾಯ
* ಅ.26: ನುಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ (65) ಹುಲಿ ದಾಳಿಯಿಂದ ಸಾವು
* ಅ.31: ಮೊಳೆಯೂರು ಅರಣ್ಯದಂಚಿನ ಕುರ್ಣೇಗಾಲದ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಕೂಡಿಗಿ ಗ್ರಾಮದ ರೈತ ದೊಡ್ಡನಿಂಗಯ್ಯ (65) ಹುಲಿ ದಾಳಿಯಿಂದ ಮೃತ
* ನ.7: ಹಳೆ ಹೆಗ್ಗುಡಿಲು ಗ್ರಾಮದಲ್ಲಿ ರೈತ ದಂಡನಾಯಕ (40) ಸಾವು ಸೆರೆಯಾದ ಹುಲಿಗಳು
* ಅ.13: ಸರಗೂರು ತಾಲ್ಲೂಕಿನ ಶಿವಪುರಮುಂಟಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ 12 ವರ್ಷದ ಹುಲಿ ಸೆರೆ
* ಅ.18: ಹೆಡಿಯಾಲ ಸಮೀಪ ಜಮೀನಿನಲ್ಲಿ 3 ವರ್ಷದ ಹೆಣ್ಣು ಹುಲಿ ಸೆರೆ
* ಅ.28: ಅಂಜನಾಪುರ ಗ್ರಾಮದಲ್ಲಿ 6 ವರ್ಷದ ಹೆಣ್ಣು ಹುಲಿ ಸೆರೆ
* ನ.5: ಹೊಸವೀಡು ಕಾಲೊನಿ ಗ್ರಾಮದಲ್ಲಿ ಒಂದೂವರೆ ವರ್ಷದ ಹೆಣ್ಣು ಹುಲಿ ಸೆರೆ