
ಪ್ರಜಾವಾಣಿ ವಾರ್ತೆ
ಸರಗೂರು: ‘ಮಾನವನ ಮೇಲೆ ದಾಳಿ ಮಾಡಿರುವ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದಿಲ್ಲ. ರೈತರ ಕಣ್ಣು ಒರೆಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಕಾಡುಪ್ರಾಣಿ ಹಾವಳಿ ಹೆಚ್ಚಾಗಿದೆ, ಜಮೀನಿಗೆ ತೆರಳಲು ಭಯವಾಗುತ್ತಿದೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆಗಬೇಕು’ ಎಂದು ರೈತರು ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಒತ್ತಾಯಿಸಿದರು.
ತಾಲ್ಲೂಕಿನ ಹಳೆಹೆಗ್ಗುಡಿಲು ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ರೈತರು ಆಕ್ರೋಶ ವ್ಯಕ್ತಪಡಿಸಿ, ‘ನಾವು ಬೆಳೆದ ಫಸಲು ಕಾಡು ಪ್ರಾಣಿಗಳಿಗೆ ಆಹಾರ ಆಗುತ್ತಿದೆ. ರೈತರ ಮೇಲೆ ಪ್ರಾಣಿ ದಾಳಿ ಆಗದ ರೀತಿಯಲ್ಲಿ ಅರಣ್ಯ ಇಲಾಖೆಯವರು ಸರಿಯಾಗಿ ಕೆಲಸ ಮಾಡಬೇಕು. ರಾತ್ರಿ ಪಾಳಿಯಲ್ಲಿ ಅರಣ್ಯ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಹುಲಿ ಹಿಡಿಯಲು ಕಾರ್ಯಾಚರಣೆ ಮಾಡಬೇಕು, ಮೃತ ರೈತನ ಮೂವರು ಹೆಣ್ಣು ಮಕ್ಕಳಿಗೆ ಕೆಲಸ ಕೊಡಬೇಕು, ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಮೃತರ ಕುಟುಂಬಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮ ಅಥವಾ ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣ ಮಾಡಿಕೊಡುವ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ನೆರವು ನೀಡಲಾಗುವುದು. ಮೃತರ ಪತ್ನಿಗೆ ದೊರೆಯುವ ಮಾಸಾಶನವನ್ನೂ ಹೆಚ್ಚಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.
‘ಒಬ್ಬ ಮಗಳಿಗೆ ಸರಗೂರು ಅರಣ್ಯ ಕಚೇರಿಯಲ್ಲಿ ಕೆಲಸ ನೀಡಲಾಗುತ್ತದೆ’ ಎಂದರು.
‘ತಾಲ್ಲೂಕಿನ ಕಾಡಂಚಿನ ಭಾಗದಲ್ಲಿ ಪದೇ ಪದೇ ಹುಲಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ₹50 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಲಾಗಿದೆ. 65 ಕಿ.ಮಿ ತಡೆಗೋಡೆ, ಚೈನಾ ಗೇಟ್, 10 ಅಡಿಗೆ ಜಾಲರಿ ಮೆಸ್ ಹಾಕಿಸುವುದರಿಂದ ಹುಲಿಗಳು ಬರುವುದನ್ನು ತಪ್ಪಿಸಬಹುದು’ ಎಂದರು.
‘ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವರ ಬಳಿ ಚರ್ಚಿಸಲಾಗಿದೆ. ಹೆಚ್ಚಿನ ಕ್ರಮಕ್ಕಾಗಿ ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅರಣ್ಯ ಸಚಿವರನ್ನು ಸರಗೂರಿಗೆ ಕರೆಸಿ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.
ಬಳಿಕ ರೈತರು ಮೃತದೇಹ ರವಾನೆಗೆ ಅವಕಾಶ ನೀಡಿದರು. ಮರಣೋತ್ತರ ಪರೀಕ್ಷೆಗೆ ಸರಗೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಯಿತು.
ತಹಶೀಲ್ದಾರ್ ಮೋಹನಕುಮಾರಿ, ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣ, ಜೆಡಿಎಸ್ ಮುಖಂಡ ಜಯಪ್ರಕಾಶ್, ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ. ಭಾಗ್ಯಲಕ್ಲ್ಮೀ, ಡಿಸಿಎಫ್ ಪರಮೇಶ್, ಎಸಿಎಫ್ ಪರಮೆಶ್, ಆರ್ಎಫ್ ವಿವೇಕ್, ರಾಜೇಶ್, ಅಮೃತೇಶ್, ಅಕ್ಷಯ್ ಕುಮಾರ್, ಡಿವೈಎಸ್ಪಿ ರವಿ, ಸಿಪಿಐ. ಗಂಗಾಧರ್, ಪಿಎಸ್ಐ ಆರ್.ಕಿರಣ್, ಚಂದ್ರಹಾಸ್, ಹಳೆ ಹೆಗ್ಗೂಡಿಲು ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜು, ದೇವಮಣಿ, ಚಂದ್ರನಾಯಕ, ಮಾಜಿ ಸದಸ್ಯ ಸೋಮಣ್ಣ, ಮಹದೇವನಾಯಕ, ನೀಲಕಂಠ, ಯಜಮಾನರಾದ ಚನ್ನನಾಯಕ, ಗೋವಿಂದರಾಜು, ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ್, ದೊಡ್ಡರಾಜು, ಇಟ್ನಾ ಅನಿಲ್, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದಾರಾಜು, ಕಂದೇಗಾಲ ಶಿವರಾಜು, ಚಲುವರಾಜು, ಎಚ್.ಹನು, ಸಾಗರೆ ಮಹೇಂದ್ರ, ಹೂವಿನಕೊಳ ಸಿದ್ದರಾಜು, ಕುಂದೂರು ಮೂರ್ತಿ, ಗ್ರಾಮೀಣ ಮಹೇಶ್, ಹಳೆ ಹೆಗ್ಗೂಡಿಲು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.