
ಹುಣಸೂರು: ಕೇಂದ್ರ ಸರ್ಕಾರದ ಹೆಚ್ಚುವರಿ ತೆರಿಗೆ ವಿರೋಧಿಸಿ ತಂಬಾಕು ಹರಾಜು ಮಾರುಕಟ್ಟೆಯಿಂದ ಹೊರಗುಳಿದಿದ್ದ ತಂಬಾಕು ಕಂಪನಿಗಳು 14 ದಿನಗಳ ಬಳಿಕ ಆರಂಭಿಸಿದರೂ ದರ ಸಮರದಿಂದ ಮಾರುಕಟ್ಟೆ ಅರ್ಧಕ್ಕೆ ಸ್ಥಗಿತಗೊಂಡಿತು.
ಕೇಂದ್ರ ಸರ್ಕಾರ ತಂಬಾಕು ಉತ್ಪನ್ನ ಮತ್ತು ಕಚ್ಚಾ ತಂಬಾಕುಗಳ ಮೇಲೆ ವಿಧಿಸಿದ್ದ ತೆರಿಗೆಯನ್ನು ವಿರೋಧಿಸಿ ಮಾರುಕಟ್ಟೆಯಿಂದ ಹೊರಗೆ ಉಳಿದಿದ್ದವು. ತೆರಿಗೆ ವಿನಾಯತಿ ಸಿಕ್ಕ ಬಳಿಕ ಗುರುವಾರ ಮಾರುಕಟ್ಟೆ ಆರಂಭಿಸಿದವು. ಆದರೆ ಮಾರುಕಟ್ಟೆಯಲ್ಲಿ ರೈತರ ನಿರೀಕ್ಷೆಗೆ ತಕ್ಕಂತೆ ದರ ಸಿಗದಿದ್ದರಿಂದ ಕಟ್ಟೆಮಳಲವಾಡಿ, ಚಿಲ್ಕುಂದ ಮತ್ತು ಪಿರಿಯಾಪಟ್ಟಣಗಳಲ್ಲಿ ರೈತರು ಮಾರುಕಟ್ಟೆ ಬಹಿಷ್ಕರಿಸಿ ಹೊರ ನಡೆದರು.
‘ಪ್ರಸಕ್ತ ಸಾಲಿನಲ್ಲಿ ತಂಬಾಕು ಮಾರುಕಟ್ಟೆ ಆರಂಭದ ದಿನದಿಂದಲೂ ರೈತರಿಂದ ವೈಜ್ಞಾನಿಕ ದರಕ್ಕೆ ಬೇಡಿಕೆ ಎದುರಾಗಿತ್ತಾದರೂ ಆಂಧ್ರದಲ್ಲಿ ಸಿಕ್ಕಷ್ಟು ದರ ನೀಡದಿದ್ದರೂ ರೈತರು ಕಳೆದ ಸಾಲಿಗಿಂತ ಉತ್ತಮ ದರ ಸಿಗುವ ಆಸೆಯಿಂದ ಮಾರುಕಟ್ಟೆಯಲ್ಲಿ 45 ಮಿಲಿಯನ್ ಕೆ.ಜಿ. ಮಾರಾಟ ಮಾಡಿದ್ದರು. ಜ. 24ರಿಂದ ತಂಬಾಕು ಉತ್ಪನ್ನ ಮತ್ತು ಕಚ್ಚಾ ತಂಬಾಕುಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ತೆರಿಗೆಯನ್ನು ವಿರೋಧಿಸಿ ಮಾರುಕಟ್ಟೆಯಿಂದ ಹೊರಗುಳಿದು ಬಜೆಟ್ ನಂತರ ಮಾರುಕಟ್ಟೆ ಆರಂಭಿಸಲಾಗಿತ್ತು. ಉತ್ತಮ ದರ್ಜೆ ತಂಬಾಕಿಗೆ ಪ್ರತಿಭಟನೆಗೂ ಮುನ್ನ ಪ್ರತಿ ಕೆ.ಜಿ.ಗೆ ₹320 ನೀಡುತ್ತಿದ್ದ ಕಂಪನಿಗಳು ಇಂದಿನ ಮಾರುಕಟ್ಟೆಯಲ್ಲಿ ₹280ರಿಂದ ₹290ಕ್ಕೆ ಕೂಗಲಾಗಿ ರೈತರು ಏಕಾಏಕಿ ಪ್ರತಿಭಟಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಹರಾಜು ಮಂಡಳಿ ಅಧಿಕಾರಿಗಳು ಕಂಪನಿ ಮತ್ತು ರೈತರ ನಡುವೆ ಸಭೆ ನಡೆಸಿ ಸಮಸ್ಯೆ ತಿಳಿಗೊಳಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಿಲ್ಲದಂತಾಯಿತು.
ತಂಬಾಕು ಬೆಳೆಗಾರ ಅಶೋಕ್ ಮಾತನಾಡಿ, ‘ತೆರಿಗೆ ಹೆಸರಿನಲ್ಲಿ ಮಾರುಕಟ್ಟೆ ಸ್ಥಗಿತಗೊಳಿಸಿದ್ದು, ತಂಬಾಕು ತನ್ನ ತೂಕ ಕಳೆದುಕೊಂಡಿದೆ. ಈ ನಷ್ಟ ಭರಿಸುವವರಾರು? ಇದಲ್ಲದೆ ಪ್ರತಿಭಟನೆಗೂ ಮುನ್ನ ನೀಡುತ್ತಿದ್ದ ದರ ನಂತರದಲ್ಲಿ ನೀಡುತ್ತಿಲ್ಲ. ಇದರಿಂದ ಪ್ರತಿ ಕೆ.ಜಿಗೆ ₹35ರಿಂದ ₹40 ನಷ್ಟವಾಗಿದೆ’ ಎಂದು ರೈತರು ಆರೋಪಿಸಿದರು.
‘ಹುಣಸೂರು, ಚಿಲ್ಕುಂದ ಮತ್ತು ಪಿರಿಯಾಪಟ್ಟಣ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ದರ ಏರುಪೇರಾಗಿ ರೈತರು ಪ್ರತಿಭಟಿಸಿ ಹೊರ ನಡೆದಿದ್ದಾರೆ. ಮಾರುಕಟ್ಟೆ ಸ್ಥಗಿತಗೊಂಡ ದಿನ ನೀಡಿದ ದರಕ್ಕೂ ಇಂದಿನ ದರಕ್ಕೆ ₹ 10ರಿಂದ ₹15 ಕಡಿಮೆ ನೀಡಿದ್ದು, ಪ್ರತಿಭಟನೆಗೆ ಕಾರಣವಾಗಿದೆ. ಇಂದಿನ ಮಾರುಕಟ್ಟೆಗೆ ಅಂದಾಜು 1500 ಬೇಲ್ ತಂಬಾಕು ತರಲಾಗಿತ್ತು’ ಎಂದು ಮೈಸೂರು ವಿಭಾಗದ ತಂಬಾಕು ಹರಾಜು ಮಾರುಕಟ್ಟೆ ವ್ಯವಸ್ಥಾಪಕ ಗೋಪಾಲ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಸಿಇಒಗಳೊಂದಿಗೆ ಚರ್ಚೆ’
ತಂಬಾಕಿನ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ತೆರಿಗೆ ಕಡಿತಗೊಳಿಸುವ ಹೋರಾಟಕ್ಕೆ ರೈತರು ಕಂಪನಿಗೆ ಬೆಂಬಲ ನೀಡಿದ್ದು ಅದರ ಲಾಭ ಬಳಸಿಕೊಂಡ ಕಂಪನಿ ಮಾರುಕಟ್ಟೆಯಲ್ಲಿ ಸೂಕ್ತ ದರ ನೀಡದ ಬಗ್ಗೆ ಸಂಬಂಧಿಸಿದ ಕಂಪನಿಗಳ ಸಿಇಒಗಳೊಂದಿಗೆ ಚರ್ಚಿಸಿ ನಾಳಿನ ಮಾರುಕಟ್ಟೆಯಲ್ಲಿ ಈ ಹಿಂದಿನ ದರದಿಂದಲೇ ಆರಂಭಿಸುವಂತೆ ಸೂಚಿಸಲಾಗಿದೆ’ ಎಂದು ಮೈಸೂರು ವಿಭಾಗದ ತಂಬಾಕು ಮಾರುಕಟ್ಟೆ ವ್ಯವಸ್ಥಾಪಕ ಗೋಪಾಲ್ ಎಚ್.ಕೆ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.